ಮಂಗಳೂರು: ನಾವು ಪಕ್ಷ ಸಂಘಟನೆ ವಿಚಾರದಲ್ಲಿ ಹಿಂದೆ ಇದ್ದು, ನಮ್ಮಲ್ಲಿ ಬೂತ್ ಮಟ್ಟದಲ್ಲಿ ಸಂಘಟನೆ ಕಡಿಮೆ ಇದೆ ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಹೇಳಿದ್ದಾರೆ.
ಮಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪದ್ಮರಾಜ್,ಪ್ರತಿ ಬೂತ್ ಮಟ್ಟದಲ್ಲೂ ಪಕ್ಷ ಸಂಘಟನೆ ಬಲಿಷ್ಠಗೊಳಿಸುತ್ತೇನೆ ಎಂದಿದ್ದು,ನನ್ನ ಸ್ಪರ್ಧೆ ಬಗ್ಗೆ ರಾಷ್ಟ್ರೀಯ ನಾಯಕರು ಕರೆ ಮಾಡಿ ಶ್ಲಾಘಿಸಿದ್ದಾರೆ ಎಂದು ಹೇಳಿದ್ದಾರೆ.
ಕೆಲವೇ ದಿನಗಳ ಅವಧಿಯಲ್ಲಿ ಸುಮಾರು 6 ಲಕ್ಷದಷ್ಟು ಮತ ಪಡೆದಿರುವ ಬಗ್ಗೆ ಹೆಮ್ಮೆ ಇದೆ ಎಂದು ಹೇಳಿರುವ ಪದ್ಮರಾಜ್,
ಕೆಲವು ಕ್ಷೇತ್ರಗಳಿಗೆ 6 ಗಂಟೆ ಸಮಯ ನೀಡಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ.
ಅಲ್ಲದೇ, ಈ ಹಿಂದಿನ ಅಭ್ಯರ್ಥಿಗಳಿಗಿಂತ ಹೆಚ್ಚಿನ ಮತ ಪಡೆದಿದ್ದೇನೆ ಎಂಬ ಹೆಮ್ಮೆಯಿದೆ ಎಂದು ತಿಳಿಸಿರುವ ಪದ್ಮರಾಜ್, ಸೋಲಿನ ನೈತಿಕ ಹೊಣೆಯನ್ನು ನಾನೇ ಹೊರುತ್ತೇನೆ ಎಂದು ಹೇಳಿದ್ದಾರೆ.
ಇದೇ ವೇಳೆ, ನಾನು ಸೋತಿರಬಹುದು, ಆದರೆ ಪಕ್ಷದ ಕಾರ್ಯಕರ್ತರು ನನಗೆ ನೀಡಿದ ಬೆಂಬಲವನ್ನು ಮರೆಯುವಂತಿಲ್ಲ ಎಂದೂ ಪದ್ಮರಾಜ್ ಪೂಜಾರಿ ತಿಳಿಸಿದ್ದಾರೆ.