ಮಂಗಳೂರು: ನಮ್ಮದು ಆಜಾನ್, ಧರ್ಮ, ಪ್ರಾರ್ಥನೆಯ ವಿರುದ್ಧದ ಹೋರಾಟವಲ್ಲ. ಸುಪ್ರೀಂ ಕೋರ್ಟ್ ಆದೇಶವೇನಿದೆ ಅದನ್ನು ಪಾಲಿಸಬೇಕೆಂಬುದು ನಮ್ಮ ಹೋರಾಟವಾಗಿದೆ ಎಂದು ಶ್ರೀರಾಮಸೇನೆಯ ರಾಜ್ಯಪ್ರಧಾನ ಕಾರ್ಯದರ್ಶಿ ಆನಂದ ಶೆಟ್ಟಿ ಅಡ್ಯಾರ್ ಹೇಳಿದ್ದಾರೆ.
ನಗರದ ಬಲ್ಮಠದಲ್ಲಿರುವ ಆರ್ಯ ಸಮಾಜದಲ್ಲಿ ಮಾತನಾಡಿದ ಅವರು, ಆಜಾನ್ ಮೈಕ್ ತೆಗೆಯಲು ನಾವು ಮೇ 9 ತಾರೀಕಿನವರೆಗೆ ಗಡುವು ನೀಡಿದ್ದೆವು. ಆಜಾನ್ ಮೈಕ್ ಸ್ಥಗಿತಗೊಳಿಸಲು ಎಲ್ಲಾ ಜನಪ್ರತಿನಿಧಿಗಳಲ್ಲೂ ಸಾಕಷ್ಟು ಮನವಿ ಮಾಡಿದ್ದೇವೆ. ಆದರೆ ಯಾವುದೇ ಫಲ ದೊರಕದ ಹಿನ್ನೆಲೆಯಲ್ಲಿ ನಾವು ಅಂದು ಪ್ರತಿಭಟನಾರ್ಥವಾಗಿ ಆಜಾನ್ ನಷ್ಟೇ ದೊಡ್ಡ ಸ್ವರದಲ್ಲಿ ಸುಪ್ರಭಾತ, ಓಂಕಾರ ನಾದವನ್ನು ಹಾಕಿದ್ದೇವೆ ಎಂದು ಹೇಳಿದರು.
ಯಕ್ಷಗಾನದಲ್ಲಿ ಮೈಕ್ ಬಳಸುವ ವಿಚಾರವು ಯಕ್ಷಗಾನ ವೀಕ್ಷಕರು, ಸಂಘಟಕರಿಗೆ ಸಂಬಂಧಪಟ್ಟದ್ದಾಗಿದೆ. ಯಕ್ಷಗಾನ ನಡೆಯುವ ಸಂದರ್ಭ ವೀಕ್ಷಕರಿಗೆ ಮಾತ್ರ ಮೈಕ್ ನ ಅವಶ್ಯಕತೆ ಇರುತ್ತದೆ. ಅಲ್ಲದೆ ಯಕ್ಷಗಾನ ಆಯೋಜಕರಿಗೆ ಮೈಕ್ ಅನುಮತಿಗೆ 15 ದಿನಗಳ ಅವಕಾಶ ಇರುತ್ತದೆ. ಸುಪ್ರೀಂ ಕೋರ್ಟ್ ಆದೇಶ ಎಲ್ಲರಿಗೂ ಅನ್ವಯವಾಗುವ ಹಿನ್ನೆಲೆಯಲ್ಲಿ ಎಲ್ಲರೂ ಪಾಲನೆ ಮಾಡಬೇಕಾದ ಅಗತ್ಯವಿದೆ. ಆದ್ದರಿಂದ ನಾವು ಆದೇಶವನ್ನು ಪಾಲನೆ ಮಾಡಬೇಕಾಗುತ್ತದೆ ಎಂದು ಹೇಳಿದರು.