ಉಜಿರೆ; ಎಸ್ ಡಿ ಎಂ ತಂತ್ರಜ್ಞಾನ ಕನ್ಸಲ್ಟೆನ್ಸಿ ಮತ್ತು ವಸತಿ ನಿಲಯಗಳ ಆಡಳಿತ ವಿಭಾಗದ ಸಿಇಓ ಆಗಿ ಪೂರನ್ ವರ್ಮ ನೇಮಕವಾಗಿದ್ದಾರೆ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಶನಲ್ ಸೊಸೈಟಿಯ ಕಚೇರಿಯಲ್ಲಿ ಇಂದು (ಸೆ.23) ನಡೆದ ಕಾರ್ಯಕ್ರಮದಲ್ಲಿ ಶ್ರೀ ಧ.ಮಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಅವರು ಪೂರನ್ ವರ್ಮ ಅವರಿಗೆ ಪುಷ್ಪಗುಚ್ಛ ನೀಡಿ ಅಧಿಕೃತವಾಗಿ ಜವಾಬ್ದಾರಿ ನೀಡಿದರು.
ಈ ವೇಳೆ ಮಾತನಾಡಿದ ಡಾ. ಸತೀಶ್ಚಂದ್ರ ಅವರು, ಪ್ರಸ್ತುತ ಕಾಲದಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಮಾಹಿತಿ ತಂತ್ರಜ್ಞಾನವು ಅತಿ ಅಗತ್ಯವಾಗಿದೆ ಎಂದರು. ಶ್ರೀ ಧ.ಮಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯಾಗಿದ್ದ ದಿ. ಡಾ. ಬಿ. ಯಶೋವರ್ಮ ಅವರ ಪುತ್ರರಾಗಿರುವ ಪೂರನ್ ವರ್ಮ ಅವರು, ವೃತ್ತಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದು, ಅವರಲ್ಲಿನ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕುರಿತ ಜ್ಞಾನ ಹಾಗೂ ತಮ್ಮ ತಂದೆಯವರೊಂದಿಗಿನ ಒಡನಾಟದ ಅನುಭವದಿಂದ ಸಂಸ್ಥೆಗೆ ಮಹತ್ತರ ರೀತಿಯಲ್ಲಿ ಪ್ರಯೋಜನವಾಗಲಿ ಶುಭ ಹಾರೈಸಿದರು.
ನೂತನ ಸಿಇಓ ಪೂರನ್ ವರ್ಮ ಅವರು ಮಾತನಾಡಿ, “ತಂತ್ರಜ್ಞಾನವು ಬದಲಾಗುತ್ತಾ ಇದ್ದ ಹಾಗೆ ಆ ಬದಲಾವಣೆಗಳಿಗೆ ಒಗ್ಗಿಕೊಳ್ಳುವುದು ಅನಿವಾರ್ಯವಾಗಿದೆ. ತಂತ್ರಜ್ಞಾನಕ್ಕೆ ಒಗ್ಗಿ ಹೋಗಿರುವ ವಿದ್ಯಾರ್ಥಿಗಳಿಗೆ ಅನುಗುಣವಾಗಿ ಶಿಕ್ಷಣ ಸಂಸ್ಥೆಗಳೂ ಬದಲಾವಣೆ ಕಂಡುಕೊಳ್ಳುವುದು ಅಗತ್ಯ. ಈ ನಿಟ್ಟಿನಲ್ಲಿ ನೂತನ ಆವಿಷ್ಕಾರ, ತಂತ್ರಜ್ಞಾನಗಳನ್ನು ನಮ್ಮದಾಗಿಸಿಕೊಳ್ಳುತ್ತ ನಾವೆಲ್ಲರೂ ಕಾರ್ಯಪ್ರವೃತ್ತರಾಗೋಣ” ಎಂದರು.
ಶ್ರೀ ಧ.ಮಂ. ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಹಣಾಧಿಕಾರಿ ಹರೀಶ್ ಎಂ. ವೈ. ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.