ಮಂಗಳೂರು : ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ಗಜೇಂದ್ರ ಅವರು ತಮ್ಮ ಇಲಾಖೆ ಅಥವಾ ಅವರ ವಿರುದ್ಧ ಯಾವುದೇ ಪ್ರಕರಣಗಳನ್ನು ದಾಖಲಿಸದಿರಲು ಅಥವಾ ದಾಳಿ ನಡೆಸದಿರಲು ತ್ರೈಮಾಸಿಕವಾಗಿ 25,000 ಲಂಚ ನೀಡಲು ಮುಂದಾಗಿದ್ದಾಗ ಮಂಗಳೂರು ಲೋಕಾಯುಕ್ತ ಕಚೇರಿಯಲ್ಲಿ ಮೇ.30 ರಂದು ವಶಕ್ಕೆ ಪಡೆದು ಬಂಧಿಸಿದ್ದರು. ಇದೀಗ ಆರೋಪಿಗೆ ಜಾಮೀನು ಮಂಜೂರು ಮಾಡಲಾಗಿದೆ.
ಮಂಗಳೂರು ಲೋಕಾಯುಕ್ತ ಪೊಲೀಸರಿಗೆ ಲಂಚ ನೀಡುವ ಆರೋಪದ ಮೇಲೆ ನಗರದ ಕಾನೂನು ಮಾಪನಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕರನ್ನು ಲೋಕಾಯುಕ್ತ ಪೊಲೀಸರು ಮೇ.30 ರಂದು ಬಂಧಿಸಿ ಜೈಲಿಗಟ್ಟಿದ್ದರು. ಮಂಗಳೂರು ಲೋಕಾಯುಕ್ತ ಇನ್ಸ್ ಪೆಕ್ಟರ್ ಭಾರತಿ ಅವರು ಮೇ.30 ರಂದು ನೀಡಿದ ದೂರಿನ ಆಧಾರದ ಮೇಲೆ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಗೌರವಾನ್ವಿತ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಮತ್ತು ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸುನೀತಾ ಎಸ್.ಜಿ ಅವರು ಜೂ. 5 ರಂದು ಆರೋಪಿ ಮತ್ತು ಪ್ರಾಸಿಕ್ಯೂಷನ್ ಪರ ವಕೀಲರ ವಾದವನ್ನು ಆಲಿಸುವ ಮೂಲಕ ಆರೋಪಿ ಗಜೇಂದ್ರ ಅವರಿಗೆ ಜಾಮೀನು ನೀಡಿದ್ದಾರೆ. ವಕೀಲರಾದ ಕೆ.ಎಸ್.ಎನ್. ರಾಜೇಶ್, ಸೌಮ್ಯ ಎಂ., ದಿವ್ಯಾ ಡೆಲ್ಮಾ ಡಿ’ಸೋಜಾ ಮತ್ತು ರಕ್ಷಿತ್ ಕುಮಾರ್ ಅವರು ಆರೋಪಿಗಳ ಪರವಾಗಿ ವಾದ ಮಂಡಿಸಿದರು.