ಬೆಳ್ತಂಗಡಿ : ಇಡೀ ವಿಶ್ವವೇ ಡಿಜಿಟಲ್ ತಂತ್ರಜ್ಞಾನಕ್ಕೆ ಹೆಚ್ಚು ಒತ್ತು ಕೊಟ್ಟಿದ್ದು, ಪ್ರತಿಯೊಂದು ವ್ಯವಹಾರಗಳೂ ಕೂಡಾ ಡಿಜಿಟಲೀಕರಣಗೊಂಡಿರುವುದು ಸರ್ವೇ ಸಾಮಾನ್ಯ, ಇದರಲ್ಲಿ ಭಾರತವೂ ಯಾರಿಗೂ ಕಡಿಮೆಯಿಲ್ಲ ಎಂಬಂತೆ ಡಿಜಿಟಲ್ ತಂತ್ರಜ್ಞಾನದಲ್ಲಿ ಅತಿ ವೇಗವಾಗಿ ಪ್ರಗತಿಯನ್ನು ಕಂಡಿದೆ. ಇದಕ್ಕೆ ಪೂರಕವಾಗಿ ಡಿಜಿಟಲ್ ಇಂಡಿಯಾ ಎಂಬ ಪರಿಕಲ್ಪನೆಯಲ್ಲಿ ಎಲ್ಲಾ ಯೋಜನೆಗಳು ಡಿಜಿಟಲೀಕರಣಗೊಂಡಿದೆ.ಇಷ್ಟೆಲ್ಲಾ ತಂತ್ರಜ್ಞಾನಗಳು ಮುಂದುವರಿದಿದ್ದರೂ ಬೆಳ್ತಂಗಡಿ ತಾಲೂಕಿನ ಹತ್ಯಡ್ಕ ಗ್ರಾಮದ ಸುತ್ತಲಿನ ಪ್ರದೇಶ ಇದಕ್ಕೆ ಅಪವಾದವೆಂಬಂತಿದೆ.
ಅರಸಿನಮಕ್ಕಿ, ಶಿಶಿಲ, ಶಿಬಾಜೆ, ರೆಖ್ಯಾ, ಕಳೆಂಜ ಗ್ರಾಮದ ಜನತೆಗೆ ಇನ್ನೂ ಎ.ಟಿ.ಎಂ. ವ್ಯವಹಾರದ ಅವಕಾಶವೇ ದೊರೆತಿಲ್ಲ. ಇಲ್ಲಿನ ನಿವಾಸಿಗಳು ಅಗತ್ಯಕ್ಕೆ ಹಣ ಡ್ರಾ ಮಾಡಬೇಕಾದರೆ ಎ.ಟಿ.ಎಂ. ಹಿಡಿದುಕೊಂಡು ದೂರದ ಕೊಕ್ಕಡಕ್ಕೆ ಹೋಗಬೇಕಾದ ಪರಿಸ್ಥಿತಿ. ಈ ಕುರಿತು ಸಾರ್ವಜನಿಕರು ಹಲವಾರು ಬಾರಿ ಸಂಬಂಧಪಟ್ಟವರನ್ನು ಒತ್ತಾಯಿಸಿದರೂ ಇದುವರೆಗೆ ಯಾವುದೇ ಪ್ರಯೋಜನವಾಗಿರುವುದಿಲ್ಲ. ಇಲ್ಲಿರುವ ಮೂರು ನಾಲ್ಕು ಬ್ಯಾಂಕುಗಳಲ್ಲಿ ಸಾವಿರಾರು ರೈತರು, ಮಹಿಳೆಯರು, ವಿದ್ಯಾರ್ಥಿಗಳು ವ್ಯವಹಾರವನ್ನು ನಡೆಸುತ್ತಿದ್ದು, ಈ ಬ್ಯಾಂಕ್ಗಳಲ್ಲಿ ಎ.ಟಿ.ಎಂ. ಕಾರ್ಡ್ ಕೂಡಾ ನೀಡುತ್ತಿದ್ದಾರೆ.
ಆದರೆ ಈ ಎ.ಟಿ.ಎಂ. ಕಾರ್ಡ್ ಉಪಯೋಗಿಸಬೇಕಾದರೆ ದೂರದ ಊರಿಗೆ ಹೋಗಬೇಕಾದ ಪರಿಸ್ಥಿತಿ ಇದೆ. ಇನ್ನಾದರೂ ಸಂಬಂಧಪಟ್ಟ ಜನಪ್ರತಿನಿಧಿಗಳು, ಬ್ಯಾಂಕ್ ಅಧಿಕಾರಿಗಳು ಇತ್ತ ಗಮನಹರಿಸಿ ಈ ಎಲ್ಲಾ ಪ್ರದೇಶಗಳಿಗೆ ಕೇಂದ್ರಸ್ಥಾನದಂತಿರುವ ಅರಸಿನಮಕ್ಕಿಯಲ್ಲಿ ಎ.ಟಿ.ಎಂ. ಸೆಂಟರ್ ಒದಗಿಸುವತ್ತ ಗಮನಹರಿಸಬೇಕಾಗಿದೆ.