ಮಂಗಳೂರು: ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಸಾಹಿತಿ ನಾ. ಡಿ. ಸೋಜಾ ಅಸ್ತಂಗತರಾಗಿದ್ದಾರೆ.ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಾರ್ಬಟ್ ಡಿ’ಸೋಜಾ (87) ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಡಿಸೋಜಾ ಅವರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿಯ ಅಗಲಿದ್ದಾರೆ. ಸಾಗರದ ನಗರಸಭೆ ಆವರಣದಲ್ಲಿರುವ ಗಾಂಧಿ ಮೈದಾನದಲ್ಲಿ ಡಿಸೋಜಾ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಜ.7ರಂದು ಅಂತ್ಯಕ್ರಿಯೆ ನೆರವೇರಿಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.
ನಾ.ಡಿಸೋಜಾ ಪುತ್ರ ನವೀನ್ ಡಿಸೋಜಾ ತಮ್ಮ ಫೇಸ್ಬುಕ್ ಖಾತೆಯಲ್ಲಿ ತಂದೆಯ ನಿಧನದ ಮಾಹಿತಿ ನೀಡಿದ್ದಾರೆ. ಹಿರಿಯ ಸಾಹಿತಿ ನಾ.ಡಿಸೋಜ ನಿಧನದ ವಿಷಯ ತಿಳಿಯುತ್ತಿದ್ದಂತೆ ರಾಜ್ಯದ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ನಾ ಡಿಸೋಜಾ ಅವರು ಮಡಿಕೇರಿಯಲ್ಲಿ ನಡೆದ 80ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಶರಾವತಿ ಮುಳುಗಡೆ ಪ್ರದೇಶದ ಹಿನ್ನೆಲೆ ಕಥನವಿದ್ದ ಇವರ ‘ದ್ವೀಪ’ ಕಾದಂಬರಿ ಸಿನಿಮಾ ಆಗಿತ್ತು. ನವೀನ್ ಡಿಸೋಜಾ ಪೋಸ್ಟ್
ನಮ್ಮ ಪೂಜ್ಯ ತಂದೆ ಖ್ಯಾತ ಸಾಹಿತಿ, ನಾ.ಡಿಸೋಜಾ ರವಿವಾರ (05.01.2025) ಸಂಜೆ 7.50 ಕ್ಕೆ ಅನಾರೋಗ್ಯದ ಕಾರಣ ಮಂಗಳೂರಿನ ಆಸ್ಪತ್ರೆಯಲ್ಲಿ ದೈವಾಧೀನರಾಗಿದ್ದಾರೆ. ಅವರ ಪಾರ್ಥಿವ ಶರೀರವನ್ನು ನಾಳೆ ಮಧ್ಯಾಹ್ನದ ನಂತರ ಸಾಗರದ ಅವರ ಸ್ವಗೃಹದಲ್ಲಿ ಸಾರ್ವಜನಿಕ ವೀಕ್ಷಣೆಗೆ ಇಡಲಾಗುವುದು. – ಇಂತಿ ಅವರ ಕುಟುಂಬ ಎಂದು ಅವರು ಪೋಸ್ಟ್ ಮಾಡಿದ್ದಾರೆ.