ಮಂಗಳೂರು: ಕೇರಳದ ತ್ರಿಶೂರ್ ನಲ್ಲಿ ತನ್ನ ಅಜ್ಜ- ಅಜ್ಜಿಯ ಕೊಲೆ ಮಾಡಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಆರೋಪಿಯೊಬ್ಬನನ್ನು ಮಂಗಳೂರಿನಲ್ಲಿ ಬಂಧಿಸಲಾಗಿದೆ.
ಕಾರ್ ಸ್ಟ್ರೀಟ್ ನಲ್ಲಿ ಚಿನ್ನಾಭರಣ ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಆತನ ವರ್ತನೆ ಬಗ್ಗೆ ಅನುಮಾನಗೊಂಡ ಪೊಲೀಸರು ಆತನನ್ನು ಬಂಧಿಸಿದ್ದಾರೆ. ತ್ರಿಶೂರ್ ಜಿಲ್ಲೆಯ ವೈಲತ್ತೂರು ನಿವಾಸಿ ಅಹಮ್ಮದ್ ಅಕ್ಕಲ್ (27 ) ಬಂಧಿತ ಆರೋಪಿ.
ಈತ ತ್ರಿಶೂರ್ ಜಿಲ್ಲೆಯ ವಡೆಕ್ಕೆಕಾಡ್ ಎಂಬಲ್ಲಿ ಜುಲೈ 23 ರಂದು ರಾತ್ರಿ ತನ್ನ ಅಜ್ಜ ಮತ್ತು ಅಜ್ಜಿಯನ್ನು ಕೊಲೆ ಮಾಡಿ ಅವರ ಚಿನ್ನಾಭರಣಗಳನ್ನು ದೋಚಿ ಮಂಗಳೂರಿಗೆ ಬಂದಿದ್ದ. ಆತನ ಬಳಿಯಿಂದ ಒಂದು ಮುತ್ತಿನ ಎರಡು ಎಳೆಯ ಬಂಗಾರದ ಸರ, ಸಣ್ಣ ಪದಕವಿರುವ ಚೈನ್, ಮೂರು ಜೊತೆ ಕಿವಿಯೊಲೆ, ಐದು ಉಂಗುರ, ಎರಡು ಕೈಬಳೆ, ಪಾಸ್ ಪೋರ್ಟ್ ಹಾಗೂ ಇತರೆ ದಾಖಲಾತಿಗಳನ್ನು ವಶಕ್ಕೆ ಪಡೆಯಲಾಗಿದೆ.
ಸೋಮವಾರ ಮಂಗಳೂರಿನ ಕಾರ್ ಸ್ಟ್ರೀಟ್ ಪರಿಸರದಲ್ಲಿ ಅನುಮಾನಸ್ಪದ ಚಿನ್ನಾಭರಣಗಳನ್ನು ಮಾರಾಟ ಮಾಡಲು ಯತ್ನಿಸಿದಾಗ ಪೊಲೀಸರಿಗೆ ಅತಿಥಿಯಾಗಿದ್ದಾನೆ.