ಮಹೇಂದ್ರ ಸಿಂಗ್ ಧೋನಿಯವರು ಆಗಸ್ಟ್ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ನಿವೃತ್ತಿ ಪಡೆದ ಧೋನಿಯವರಿಗೆ ಅನೇಕ ರಾಜಕೀಯ ಗಣ್ಯರು, ವಿವಿಧ ಕ್ಷೇತ್ರಗಳ ಸೆಲೆಬ್ರಿಟಿಗಳು ಸೇರಿ, ಕೋಟ್ಯಂತರ ಅಭಿಮಾನಿಗಳು ಮಹೇಂದ್ರ ಸಿಂಗ್ ಧೋನಿಯವರಿಗೆ ಶುಭ ಕೋರಿದ್ದಾರೆ…
ಇದೆಲ್ಲದರ ಮಧ್ಯೆ ಆಗಸ್ಟ್ 19ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಧೋನಿಯವರಿಗೆ ಪತ್ರವೊಂದನ್ನು ಬರೆದಿದ್ದಾರೆ. ಮಹೇಂದ್ರ ಸಿಂಗ್ ಧೋನಿಯವರು ನಿವೃತ್ತರಾದ ಹಿನ್ನೆಲೆಯಲ್ಲಿ ಎರಡು ಪುಟಗಳ ಪತ್ರ ಬರೆದಿರುವ ಮೋದಿಯವರು, ಪತ್ರದ ಪ್ರಾರಂಭದಲ್ಲಿ ಡಿಯರ್..ಮಹೇಂದ್ರಾ…ಎಂದು ಉಲ್ಲೇಖಿಸಿದ್ದು ತೀರ ವಿಶೇಷ ಎನ್ನಿಸುತ್ತದೆ.
ಇಂದು ಈ ಪತ್ರವನ್ನು ಟ್ವಿಟರ್ನಲ್ಲಿ ಶೇರ್ ಮಾಡಿರುವ ಧೋನಿಯವರು, ಕಲಾವಿದನಾಗಲಿ, ಯೋಧನಾಗಲಿ, ಕ್ರೀಡಾಪಟುವಾಗಲಿ…ಬಯಸುವುದು ಮೆಚ್ಚುಗೆಯನ್ನು. ಹಾಗೇ ಅವರ ಕಠಿಣ ಪರಿಶ್ರಮ ಮತ್ತು ತ್ಯಾಗವನ್ನು ಪ್ರತಿಯೊಬ್ಬರೂ ಗಮನಿಸುತ್ತಾರೆ ಹಾಗೂ ಶ್ಲಾಘಿಸುತ್ತಾರೆ. ಹಾಗೇ..ನನ್ನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ, ಶುಭ ಹಾರೈಸಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಕೃತಜ್ಞತೆಗಳು ಎಂದು ಬರೆದಿದ್ದಾರೆ.
ನರೇಂದ್ರ ಮೋದಿಯವರು ತಮ್ಮ ಪತ್ರದಲ್ಲಿ ಧೋನಿಯವರನ್ನು ಮನಸ್ಪೂರ್ತಿ ಹೊಗಳಿದ್ದಾರೆ. ನಿಮ್ಮ ಹೇರ್ಸ್ಟೈಲ್ ಹೇಗಿತ್ತು ಎಂಬುದು ಮುಖ್ಯವಲ್ಲ..ಆದರೆ ಸೋಲು ಮತ್ತು ಗೆಲುವು ಎರಡೂ ಸಂದರ್ಭದಲ್ಲಿ ನೀವು ಅದೇ ಶಾಂತರೀತಿಯಲ್ಲಿ ಇರುತ್ತಿದ್ದಿರಲ್ಲ..ಆ ನಿಮ್ಮ ತಾಳ್ಮೆ ಯುವಜನತೆಗೆ ಅದ್ಭುತ ಪಾಠ ಎಂದು ಹೇಳಿದ್ದಾರೆ. ಹಾಗೇ, ಭಾರತೀಯ ಸೇನೆ ಬಗ್ಗೆ ನಿಮಗೆ ಇರುವ ಪ್ರೀತಿ, ಗೌರವ ನೋಡಿ ನನಗೆ ತುಂಬ ಖುಷಿಯಾಗಿದೆ. ಸೇನಾ ಸಿಬ್ಬಂದಿಯ ಒಳಿತಿಗಾಗಿ ಯೋಚಿಸುವ ನಿಮ್ಮ ಗುಣ ಶ್ಲಾಘನೀಯ ಎಂದೂ ಉಲ್ಲೇಖಿಸಿದ್ದಾರೆ.
ನೀವಿನ್ನು ನಿಮ್ಮ ಪತ್ನಿ ಮತ್ತು ಮಗಳು ಝಿವಾ ಜತೆ ಹೆಚ್ಚಿನ ಸಮಯ ಕಳೆಯಲು ಸಾಧ್ಯವಾಗುತ್ತದೆ. ಅವರಿಗೂ ನನ್ನ ಶುಭಹಾರೈಕೆಗಳು. ನಿಮ್ಮ ಸಾಧನೆಯಲ್ಲಿ ಅವರ ತ್ಯಾಗವಿದೆ. ಪಂದ್ಯಗಳಲ್ಲಿ ಗೆದ್ದ ಬಳಿಕ ನೀವು ನಿಮ್ಮ ಮುದ್ದಾದ ಮಗಳೊಂದಿಗೆ ಅದನ್ನು ಖುಷಿಯಿಂದ ಆಚರಿಸುವ ಎಷ್ಟೋ ಫೋಟಗಳನ್ನು ನಾನು ನೋಡಿದ್ದೇನೆ. ವೃತ್ತಿ ಮತ್ತು ವೈಯಕ್ತಿಕ ಬದುಕನ್ನು ನೀವು ಸಮತೋಲನ ಮಾಡಿದ ರೀತಿ ಅನುಕರಣೀಯ. ನಿಮ್ಮ ಭವಿಷ್ಯ ಅದ್ಭುತವಾಗಿರಲಿ..ಒಳ್ಳೆಯದಾಗಲಿ ಎಂದು ಬರೆದಿದ್ದಾರೆ.