ಮಂಗಳೂರು: ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ನೀವು ಪಾಕಿಸ್ತಾನದ ಅಧಿಕಾರಿ ಅಲ್ಲ, ಇಂಡಿಯನ್ ಪೊಲೀಸ್ ಅಫೀಸರ್ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದ್ದಾರೆ.
ಬೋಳಿಯಾರು ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಮಾತನಾಡಿದ ಸಿ.ಟಿ. ರವಿ, ನೀವು ಯಾಕೆ ಪಾಕಿಸ್ತಾನದ ಕಮಿಷನರ್ ತರಹ ವರ್ತಿಸಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ.
ವಿಜಯೋತ್ಸವ ಮೆರವಣಿಗೆಯಲ್ಲಿ ಭಾರತ್ ಮಾತಾ ಕೀ ಜೈ ಎನ್ನುವುದು ಅಪರಾಧವೇ ಎಂದು ಪ್ರಶ್ನಿಸಿರುವ ಸಿ.ಟಿ. ರವಿ, ಈ ಕಾರಣಕ್ಕೆ ಮತಾಂಧರು ಥಳಿಸಿ ಚೂರಿಯಿಂದ ಇರಿದಿದ್ದಾರೆ, ಆದರೆ ಮರುದಿನ ಕೆಲವರು
ಪಾಕಿಸ್ತಾನದ ಕುನ್ನಿಗಳೇ ಅಂತ ಘೋಷಣೆ ಕೂಗಿದ್ದಾರೆ ಅಂತ ದೂರು ಕೊಟ್ಟಿದ್ದಾರೆ, ಪಾಕಿಸ್ತಾನದ ಕುನ್ನಿಗಳೇ ಅಂತ ಕೂಗಿದ್ದರೆ ಆ ಪಾಕಿಸ್ತಾನದ ಕುನ್ನಿಗಳು ಪ್ರಚೋದನೆಗೆ ಒಳಗಾಗಬೇಕು, ಇದನ್ನು ನೋಡಿದ್ರೆ ಖಾದರ್ ಸಾಮ್ರಾಜ್ಯದಲ್ಲಿ ಪಾಕಿಸ್ತಾನದ ಕುನ್ನಿಗಳು ಇದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ ಎಂದು ಹೇಳಿದ್ದಾರೆ.
ಮಂಗಳೂರು ಪೊಲೀಸ್ ಆಯುಕ್ತರು ಮೊದಲು ಪಾಕಿಸ್ತಾನದ ಕುನ್ನಿಗಳನ್ನು ಗುರುತಿಸಬೇಕು, ಅವರ ಮೇಲೆ ಕೇಸ್ ಹಾಕಿ ಅವರನ್ನು ಗಡೀಪಾರು ಮಾಡಬೇಕು ಎಂದು ಹೇಳಿರುವ ರವಿ, ಯು.ಟಿ. ಖಾದರ್ ಅವರೇ ಗುರುತಿಸಿ ಅವರನ್ನು ಪಾಕಿಸ್ತಾನಕ್ಕೆ ಕಳುಹಿಸಲಿ ಎಂದಿದ್ದಾರೆ.
ಪೊಲೀಸ್ ಆಯುಕ್ತರು ಪಾಕಿಸ್ತಾನದ ಕುನ್ನಿಗಳು ಎಂದು ಘೋಷಣೆ ಹಾಕಿದ್ದಾರೆ ಎಂಬ ತಮ್ಮ ಹೇಳಿಕೆ ವಾಪಸ್ ಪಡೆಯಲಿ ಎಂದು ಆಗ್ರಹಿಸಿರುವ ಎಂಎಲ್ಸಿ ರವಿ, ರಾಜ ಧರ್ಮ ಮಾತನಾಡುವ ಸ್ಪೀಕರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಆಸ್ಪತ್ರೆಗೆ ಬಂದರೂ ಗಾಯಾಳುಗಳನ್ನು ಭೇಟಿಯಾಗಿಲ್ಲ ಎಂದು ಆರೋಪಿಸಿದ್ದಾರೆ.