ಮಂಗಳೂರು; ಅಪಘಾತಕ್ಕೆ ರಾಯೂರು ಜಿಲ್ಲೆ ಸಿಂಧನೂರಿನ ಶಾಸಕ ಹಂಪನಗೌಡ ಬಾದರ್ಲಿ ಅವರ ಸಹೋದರಿಯ ಪುತ್ರ ದೀಪು ಬಲಿಯಾಗಿರುವ ಘಟನೆ ಕುಳಾಯಿಯ ಶಂಕರ ಭವನ ಹೋಟೆಲ್ ಬಳಿ ನಡೆದಿದೆ. ದೀಪುಗೌಡ (48) ಮೃತರು. ಘಟನೆಯಲ್ಲಿ ಪ್ರದೀಪ್ ಮತ್ತು ನಾಗರಾಜ್ ಅವರು ಗಾಯಗೊಂಡಿದ್ದು, ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ದೀಪು ಗೌಡ, ಪ್ರದೀಪ್, ನಾಗರಾಜ್ ಈ ಮೂವರು ಕುಳಾಯಿಯ ಶಂಕರ ಭವನ ಹೋಟೆಲ್ ನಲ್ಲಿ ಊಟ ಮುಗಿಸಿಕೊಂಡು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಉಡುಪಿ ಕಡೆಯಿಂದ ಬರುತ್ತಿದ್ದ ಪಿಕಪ್ ವಾಹನವೊಂದು ಅತೀ ವೇಗದಿಂದ ಕಾರಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಕಾರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ದೀಪು ಗೌಡ ಪ್ರದೀಪ್ ಮತ್ತು ನಾಗರಾಜ್ ರವರಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಪ್ರದೀಪ್ ಮತ್ತು ನಾಗರಾಜ್ ರವರು ರಸ್ತೆಗೆ ಎಸೆಯಲ್ಪಟ್ಟರೆ , ದೀಪು ಗೌಡ ಕಾರಿನ ಜೊತೆಯೇ ರಸ್ತೆ ಬದಿ ನಿಲ್ಲಿಸಿದ್ದ ಗೂಡ್ಸ್ ಲಾರಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿಯ ರಭಸಕ್ಕೆ ದೀಪು ಗೌಡ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನಪ್ಪಿದ್ದಾರೆ.
ಉಡುಪಿ-ಮಂಗಳೂರು ರಸ್ತೆಯಲ್ಲಿ ಸುಕುಮಾರ್ ಚಲಾಯಿಸುತ್ತಿದ್ದ ಪಿಕಪ್ ವಾಹನದ ಅತಿಯಾದ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಘಟನೆಗೆ ಕಾರಣ ಎನ್ನಲಾಗಿದೆ. ಅಪಘಾತಕ್ಕೀಡಾದವರು ಮಿತ್ರರಾಗಿದ್ದು, ವ್ಯಾಪಾರದ ಕುರಿತ ಕೆಲಸಕ್ಕಾಗಿ ಮಂಗಳೂರಿಗೆ ಬಂದಿದ್ದರು ಎನ್ನಲಾಗಿದೆ.