ಕಡಬ ನಿನ್ನೆ ಸೊಪ್ಪು ತರುವುದಾಗಿ ಹೋಗಿ ನಾಪತ್ತೆಯಾಗಿದ್ದ ಕಡಬ ತಾಲೂಕಿನ ರೆಖ್ಯಾದ ನಿವಾಸಿ ಸುಂದರ ಗೌಡ ಅವರ ಪತ್ನಿ ಶಕುಂತಲಾ ಅವರ ಮೃತದೇಹ ಇಂದು ಬೆಳಗ್ಗೆ ಎಂಜಿರ ಎಂಬಲ್ಲಿ ನದಿ ಬದಿಯಲ್ಲಿ ಪತ್ತೆಯಾಗಿದೆ.

ನಿನ್ನೆ ಇಡೀ ದಿನ ಶಕುಂತಲಾ ಅವರ ಪತ್ತೆಗಾಗಿ ಧರ್ಮಸ್ಥಳದ ಪೊಲೀಸರು, ಅಗ್ನಿಶಾಮಕ ದಳದವರು, ಪಿಲಿಕುಳದ ಮುಳುಗು ತಜ್ಞರು ನದಿಯಲ್ಲಿ ಹುಡುಕಾಟ ನಡೆಸಿದ್ದರು. ಆದರೆ ಅವರ ಬಗ್ಗೆ ಸುಳಿವು ಸಿಕ್ಕಿರಲಿಲ್ಲ. ನದಿಯ ಬದಿಯಲ್ಲಿ ಚಪ್ಪಲಿ ಪತ್ತೆಯಾದ್ದರಿಂದ ಹೊಳೆಗೆ ಆಕಸ್ಮಿಕವಾಗಿ ಬಿದ್ದರಿಬಹುದೋ ಇಲ್ಲಾ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಿ ಹುಡುಕಾಟ ಮುಂದುವರೆಸಲಾಗಿತ್ತು.

ಇಂದು ಕೂಡ ಶೋಧ ಕಾರ್ಯ ಮುಂದುವರೆಸಿದಾಗ 1 ಕಿ. ಮೀ ದೂರದಲ್ಲಿ ಹೊಳೆಯ ಬದಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.ಇನ್ನು ನಾಪತ್ತೆಯಾಗುವುದಕ್ಕೂ ಮುನ್ನ ಶಕುಂತಲಾ ಅವರು ಬೆಂಗಳೂರಿನಲ್ಲಿರುವ ತಮ್ಮ ಪುತ್ರ ಹರ್ಷಿತ್ ಎಂಬವರಿಗೆ ಕರೆ ಮಾಡಿದ್ದರು ಎನ್ನಲಾಗಿದೆ. ಇನ್ನು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಧರ್ಮಸ್ಥಳ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.