ಮಂಗಳೂರು: ಕೋವಿಡ್ ನಿರ್ವಹಣೆಯಲ್ಲಿ ಹಗರಣದ ಕುರಿತು ನ್ಯಾ. ಮೈಕಲ್ ಡಿ ಕುನ್ಹಾ ಸಮಿತಿ ಎರಡನೇ ಮತ್ತು ಕೊನೆಯ ವರದಿ ನೀಡಬೇಕಾಗಿದ್ದು, ಪ್ರಥಮ ವರದಿಯಲ್ಲಿ ಕೋವಿಡ್ ಸಂದರ್ಭದ ಅವ್ಯವಹಾರಗಳನ್ನು ಸ್ಪಷ್ಟವಾಗಿ ಉಲ್ಲೇಖ ಮಾಡಲಾಗಿದೆ ಎಂದು ಆರೋಗ್ಯ ಸಚಿವ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಹಗರಣದ ಕುರಿತು ನಿಯಮ ಬದ್ದವಾಗಿ ಕಾನೂನು ಪ್ರಕಾರ ತನಿಖೆ ಮುಂದುವರಿಸುತ್ತೇವೆ ಇದರಲ್ಲಿ ರಾಜಕೀಯ ದುರುದ್ದೇಶ ಏನಿಲ್ಲ ಎಂದು ಹೇಳಿರುವ ಆರೋಗ್ಯ ಸಚಿವರು, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ವಿರುದ್ಧ ಪ್ರಕರಣ ದಾಖಲಾದರೆ ಅವರು ಜೈಲು ಸೇರುವ ಸಂದರ್ಭ ಬರಬಹುದು ಎಂದು ಹೇಳಿದ್ದಾರೆ.
ಅಲ್ಲದೇ, ಈ ವರದಿಯಲ್ಲಿರುವುದು ನಾವು ಹುಟ್ಟು ಹಾಕಿರುವುದು ಅಲ್ಲ, ನಮ್ಮ ಇಲಾಖೆಯಲ್ಲಿರುವ ಇರುವ ಮಾಹಿತಿ ಸಂಗ್ರಹಿಸಿ ತನಿಖೆ ಮಾಡಿ ಅದರ ವರದಿ ನೀಡಿದ್ದಾರೆ ಎಂದು ಹೇಳಿರುವ ದಿನೇಶ್ ಗುಂಡೂರಾವ್, ಇದು ಐಟಿ, ಇಡಿ ತರಹ ರಾಜಕೀಯ ಪ್ರೇರಿತವಾದದ್ದು ಅಲ್ಲ ಎಂದಿದ್ದಾರೆ.
ಇದೇ ವೇಳೆ ಹಗರಣವನ್ನು ರಾಷ್ಟ್ರೀಯ ಮಟ್ಟದಲ್ಲಿ ಕೊಂಡೊಯ್ಯುವ ಬಗ್ಗೆ ಪಕ್ಷ ತೀರ್ಮಾನ ಮಾಡುತ್ತದೆ ಎಂದೂ ಆರೋಗ್ಯ ಸಚಿವರು ತಿಳಿಸಿದ್ದಾರೆ.