ಬೆಂಗಳೂರು: ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಇಲಾಖೆ ಸಚಿವ ಎಂ.ಬಿ. ಪಾಟೀಲ್ ಶೆಡ್ ಗಿರಾಕಿ ಎಂದು ಕರೆದಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬಕ್ಕೆ ಸೇರಿದ ಸಿದ್ಧಾರ್ಥ ವಿಹಾರ ಟ್ರಸ್ಟ್ ಗೆ ಕೆಐಎಡಿಬಿ ಯಿಂದ ಐದು ಎಕರೆ ಜಮೀನು ಮಂಜೂರು ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಎಂ.ಬಿ. ಪಾಟೀಲ್, ಛಲವಾದಿ ನಾರಾಯಣಸ್ವಾಮಿ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಖರ್ಗೆ ಅವರ ಬಗ್ಗೆ ಮಾತಾಡುತ್ತಾರೆ, ಖರ್ಗೆ ಅವರೇನೂ ನಾರಾಯಣಸ್ವಾಮಿ ಥರಾ ಶೆಡ್ ಗಿರಾಕಿನಾ ಎಂದು ಪ್ರಶ್ನಿಸಿದ್ದಾರೆ.
ಸಚಿವ ಪಾಟೀಲ್ ಟೀಕೆಗೆ ಉತ್ತರಿಸಿರುವ ಛಲವಾದಿ ನಾರಾಯಣ ಸ್ವಾಮಿ, ನಾನು ಶೆಡ್ ಗಿರಾಕಿ ಆಗಲು ಇದೇ ಕಾಂಗ್ರೆಸ್ ಕಾರಣ, ನಾನು ಬಿಜೆಪಿಗೆ ಬರದೇ ಹೋಗಿದಿದ್ದರೆ ಇನ್ನೂ ಶೆಡ್ ನಲ್ಲೇ ಇರುತ್ತಿದ್ದೆ, ಕಾಂಗ್ರೆಸ್ ನಲ್ಲಿ ಇರುತ್ತಿದ್ದರೆ ನನಗೆ ಶೆಡ್ಡೇ ಗತಿಯಾಗುತ್ತಿತ್ತು
ಬಿಜೆಪಿಗೆ ಬಂದು ಶೆಡ್ನಿಂದ ಗುಡ್ ಪರ್ಸನ್ ಆಗಿದ್ದೇನೆ ಎಂದು ಹೇಳಿದ್ದಾರೆ.
ಖರ್ಗೆ ಕುಟುಂಬದ ಒಡೆತನದ ಸಿದ್ಧಾರ್ಥ ವಿಹಾರ ಟ್ರಸ್ಟ್ ಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಏರೋಸ್ಪೇಸ್ ಪಾರ್ಕ್ ಬಳಿ ಐದು ಎಕರೆ ಜಮೀನು ಹಸ್ತಾಂತರ ಮಾಡಲ್ಪಟ್ಟಿರುವ ಬಗ್ಗೆ ಛಲವಾದಿ ನಾರಾಯಣಸ್ವಾಮಿ ರಾಜ್ಯಪಾಲರಿಗೆ ದೂರು ನೀಡಿದ್ದರು.