ಸುಳ್ಯ: ಮಡಿಕೇರಿಯಿಂದ ಕಟೀಲಿಗೆಂದು ಕಾಲ್ನಡಿಗೆಯಲ್ಲೇ ಹೋಗುತ್ತಿದ್ದ ವ್ಯಕ್ತಿ ಸುಳ್ಯದಲ್ಲಿ ಅಸ್ವಸ್ಥಗೊಂಡು ಬಿದ್ದ ಹಾಗೂ ಸುಳ್ಯದ ಕೆಲವು ಯುವಕರು ಅವರನ್ನು ಉಪಚರಿಸಿ ಮಂಗಳೂರಿಗೆ ಕಳುಹಿಸಿದ ವ್ಯವಸ್ಥೆ ಮಾಡಿದ ಘಟನೆ ಇಂದು ನಡೆದಿದೆ.
ಮಂಗಳೂರಿನ ಕಟೀಲು ನಿವಾಸಿ ನಾರಾಯಣ ರೈ ಯವರು ಮಡಿಕೇರಿ ಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ದೇಶದಾದ್ಯಂತ ಲಾಕ್ ಡೌನ್ ಆದ ಹಿನ್ನೆಲೆಯಲ್ಲಿ ಕೆಲಸ ಇಲ್ಲದೆ ಇತ್ತ ಊರಿಗೂ ತೆರಳಲಾಗದೆ ಮಡಿಕೇರಿಯಲ್ಲೇ ಇದ್ದರು.
ಹೋಗಲು ಹಣವೂ ವಾಹನವೂ ಇಲ್ಲದ ಕಾರಣ ಐದು ದಿನಗಳ ಹಿಂದೆ ಮಡಿಕೇರಿಯಿಂದ ಕಾಲ್ನಡಿಗೆಯಲ್ಲೇ ಊರಿಗೆ ಹೊರಟರು.ಇಂದು ಸುಳ್ಯ ಜ್ಯೋತಿ ಸರ್ಕಲ್ ಅಪೋಲೋ ಟಯರ್ಸ್ ಮುಂಭಾಗ ತಲುಪುವಾಗ ಅಲ್ಲಿ ತಲೆ ತಿರುಗಿ ಬಿದ್ದರೆನ್ನಲಾಗಿದೆ. ಇದನ್ನು ಕಂಡ ರಶೀದ್ ಜಟ್ಟಿಪಳ್ಳ ,ರಜಾಕ್ ಕೆ.ಎಂ, ಹಮೀದ್ ಬಿ.ಕೆ, ದೀಕ್ಷಿತ್ ಕಾನತ್ತಿಲ, ನೌಶಾದ್ ಎಂ.ಎಸ್, ರಜಾಕ್ ನೆಲ್ಲಿಕಾಡ್ ಅವರನ್ನು ಉಪಚರಿಸಿ ಊಟ ತಂದುಕೊಟ್ಟು, ಸಹಾಯ ಧನ ನೀಡಿ
ಸುಳ್ಯ ಪೋಲಿಸ್ ಠಾಣೆಗೆ ಮಾಹಿತಿ ನೀಡಿದರು.
ಸ್ಥಳಕ್ಕೆ ಆಗಮಿಸಿದ ಸುಳ್ಯ ಎಸ್.ಐ. ಹರೀಶ್ ಅವರು ನಾರಾಯಣ ರೈಯವರನ್ನು ಠಾಣೆಗೆ ಕರೆದುಕೊಂಡು ಹೋಗಿ ಮಂಗಳೂರಿಗೆ ಕಳುಹಿಸಿ ಕೊಡುವ ವ್ಯವಸ್ಥೆಯನ್ನು ಮಾಡಿದರೆಂದು ತಿಳಿದುಬಂದಿದೆ.