ಬ್ರಹ್ಮಾವರ: ತಕ್ಷಣದಲ್ಲಿಯೇ ಸರ್ವಿಸ್ ರಸ್ತೆ ಕಾಮಗಾರಿ ಪ್ರಾರಂಭವಾಗದಿದ್ದರೆ ಏಪ್ರಿಲ್ 29 ರಂದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಫ್ಲೈಓವರ್ ಹೋರಾಟ ಸಮಿತಿಯ ಸದಸ್ಯರಾದ ಆಲ್ವಿನ್ ಅಂದ್ರಾದೆ ತಿಳಿಸಿದ್ದಾರೆ.
ಅವರು ಬ್ರಹ್ಮಾವರದ ಹೋಟೆಲೊಂದರಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “90 ಕೋಟಿ ರೂ. ವೆಚ್ಚದಲ್ಲಿ ಮಾಬುಕಳ ಸೇತುವೆಯಿಂದ ಭದ್ರಗಿರಿವರೆಗೆ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಟೆಂಡರ್ ಈಗಾಗಲೇ ಅನುಮೋದನೆಗೊಂಡಿದೆ ಎಂದು ಅಧಿಕಾರಿಗಳಿಂದ ಮಾಹಿತಿ ಲಭಿಸಿದೆ. ಆದರೆ ಇನ್ನೂ ಕಾಮಗಾರಿ ಪ್ರಾರಂಭವಾಗಿಲ್ಲ. ಪ್ರತಿದಿನ ಸುಮಾರು 2,000 ವಿದ್ಯಾರ್ಥಿಗಳು ಈ ಮಾರ್ಗದಲ್ಲಿ ವಿರುದ್ಧ ದಿಕ್ಕಿನಲ್ಲಿ ಸಂಚರಿಸುತ್ತಿದ್ದಾರೆ. ಆದ್ದರಿಂದ, ಏಪ್ರಿಲ್ 27 ರೊಳಗೆ ತಾತ್ಕಾಲಿಕ ಸರ್ವಿಸ್ ರಸ್ತೆ ನಿರ್ಮಾಣ ಕಾರ್ಯ ಪ್ರಾರಂಭವಾಗದಿದ್ದರೆ, ಏಪ್ರಿಲ್ 29 ರಂದು ಪ್ರತಿಭಟನೆ ನಡೆಸಲಾಗುವುದು” ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಭುಜಂಗ ಶೆಟ್ಟಿ, ವಸಂತ್ ಗಿಳಿಯಾರ್, ಆರ್ಟಿಐ ಕಾರ್ಯಕರ್ತ ಸದಾಶಿವ ಶೆಟ್ಟಿ, ಶ್ಯಾಮರಾಜ್ ಬಿರ್ತಿ, ಹರೀಶ್ ಕುಂದರ್, ಉದಯ ಕುಮಾರ್, ಶಂಕರ ಶೆಟ್ಟಿ, ಜೋಸೆಫ್ ಸುವಾರಿಸ್ ಮತ್ತು ವಿಕ್ರಮ್ ಪ್ರಭು ಉಪಸ್ಥಿತರಿದ್ದರು.