ಬೆಳ್ತಂಗಡಿ : ದೇವಸ್ಥಾನ ಹಾಗೂ ಶಾಲೆ, ಮನುಷ್ಯನಿಗೆ ಎರಡು ಕಣ್ಣುಗಳಿದ್ದಂತೆ ಇವೆರಡರ ಅಭಿವೃದ್ಧಿಯಲ್ಲಿ ಊರವರ ಪಾತ್ರ ಅತಿ ಮುಖ್ಯವಾಗಿದೆ.ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಇತರ ಸಂಘ-ಸಂಸ್ಥೆಗಳ ಸಹಕಾರದಲ್ಲಿ ಈಗಾಗಲೇ 5 ಸರಕಾರಿ ಕನ್ನಡ ಶಾಲೆಗಳ ಅಭಿವೃದ್ಧಿ ನಡೆಸಿದ್ದು 6ನೇ ಶಾಲೆಯ ಕೆಲಸ ಪ್ರಗತಿಯಲ್ಲಿದ್ದು, ಇದೀಗ 7ನೇ ಶಾಲೆಯ ಅಭಿವೃದ್ಧಿಗೆ ಮುಂದಾಗಿದೆ ಎಂದು ಉಜಿರೆ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ನ ಸಂಚಾಲಕ ಕೆ. ಮೋಹನ್ ಕುಮಾರ್ ಹೇಳಿದರು.
ಅವರು ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ನ ಸೇವಾ ಯಜ್ಞ ಕಾರ್ಯಕ್ರಮದ ಅಂಗವಾಗಿ ಸ.ಮಾ.ಹಿ.ಪ್ರಾ. ಶಾಲೆ ನಿಡ್ಲೆ ಇಲ್ಲಿನ ನಾನಾ ಅಭಿವೃದ್ಧಿ ಕಾಮಗಾರಿಗೆ ಏ.27 ರಂದು ಚಾಲನೆ ನೀಡಿ ಮಾತನಾಡಿದರು. ಕಾರ್ಯಕ್ರಮ ಉದ್ಘಾಟಿಸಿದ ಉಜಿಯ ಎಸ್ ಡಿಎಂ ಕಾಲೇಜಿನ ಎನ್ನೆಸ್ಸೆಸ್ ಯೋಜನಾಧಿಕಾರಿ ಡಾ. ಮಹೇಶ್ ಕುಮಾರ್ ಶೆಟ್ಟಿ ಮಾತನಾಡಿ ಪ್ರಾರ್ಥನಾ ಮಂದಿರಗಳು ಆಯಾ ಧರ್ಮಕ್ಕೆ ಮೀಸಲಾಗಿದ್ದರೆ ಶಾಲೆಗಳು ಧರ್ಮಾತೀತ, ಮತಾತೀತವಾಗಿ ಸಮಾಜದ ಉನ್ನತಿಗೆ, ರಾಷ್ಟ್ರದ ಅಭಿವೃದ್ಧಿಗೆ ಕಾರಣವಾಗುತ್ತವೆ ಎಂದರು.
ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಸಾದ್ ಶೆಟ್ಟಿ ಏಣಿಂಜೆ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಕಾಶ್, ಮಡಂತ್ಯಾರ್ ಸೇಕ್ರೆಡ್ ಹಾರ್ಟ್ ಕಾಲೇಜಿನ ಎನ್ನೆಸ್ಸೆಸ್ ಯೋಜನಾಧಿಕಾರಿ ಪ್ರಶಾಂತರಾಜ್, ಗ್ರಾಪಂ ಸದಸ್ಯರಾದ ಜಗದೀಶ ಶೆಟ್ಟಿ ,ಮೋಹನ್ ಪೂಜಾರಿ, ಹೇಮಾವತಿ ಕಟ್ಟಡ ದುರಸ್ತಿ ಸಮಿತಿ ಅಧ್ಯಕ್ಷ ಭದ್ರಯ್ಯ ಗೌಡ, ಗೌರವಾಧ್ಯಕ್ಷ ಜಿನ್ನಪ್ಪ ಗೌಡ ಪ್ರಮುಖರಾದ ವೀರೇಶ್ವರ ಹೆಬ್ಬಾರ್, ರಾಜಗುರು ಹೆಬ್ಬಾರ್, ಪ್ರಫುಲ್ಲಾ,ಮಾಧವಿ ಮತ್ತಿತರರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಮೀನಾಕ್ಷಿ ಎಚ್. ಕಾರ್ಯಕ್ರಮ ನಿರೂಪಿಸಿದರು.