ಮಂಗಳೂರು: ಮನೆಗಳ್ಳತನವಾದ ಮೂರು ಗಂಟೆಯಲ್ಲಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಆರೋಪಿಗಳಿಂದ ಕದ್ದ ಮಾಲು ಹಾಗೂ ನಗದನ್ನು ವಶಪಡಿಸಿಕೊಂಡಿದ್ದಾರೆ.
ಅತ್ತಾವರದ ಕೆಎಂಸಿ ಆಸ್ಪತ್ರೆ ಬಳಿಯ ಬ್ರಿಜೇಶ್ ಅಪಾರ್ಟ್ಮೆಂಟ್ ಕಟ್ಟಡದ 2 ಅಪಾರ್ಟ್ಮೆಂಟ್ಗಳಲ್ಲಿ ಜೂ.15ರ ಗುರುವಾರ ಕಳ್ಳತನ ನಡೆದಿರುವ ಬಗ್ಗೆ ಮಂಗಳೂರು ದಕ್ಷಿಣ ಠಾಣೆ ಪೊಲೀಸರಿಗೆ ದೂರು ಬಂದಿತ್ತು.ಅದೇ ದಿನ ಸಂಜೆ ಪಣಂಬೂರು ಬೀಚ್ ಬಳಿ ನಾಲ್ವರು ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದರು. ಅವರನ್ನು ವಶಕ್ಕೆ ಪಡೆದು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಬ್ರಿಜೇಶ್ ಅಪಾರ್ಟ್ಮೆಂಟ್ನ ಎರಡು ನಿವಾಸಗಳಿಗೆ ಕನ್ನ ಹಾಕಿ ದೆಹಲಿಗೆ ಪರಾರಿಯಾಗಲು ಯೋಜಿಸುತ್ತಿದ್ದರು ಎಂಬುದು ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರನ್ನು ದೆಹಲಿಯ ಮೊಹಮ್ಮದ್ ಆಶಿಫ್ ಅಲಿಯಾಸ್ ಆಶಿಫ್ (23) ಮತ್ತು ಶೇಖ್ ಮೈದುಲ್ (25) ಹಾಗೂ ಪಶ್ಚಿಮ ಬಂಗಾಳದ ರಫೀಕ್ ಖಾನ್ (24) ಮತ್ತು ದೆಹಲಿಯ ವಕೀಲ ಅಹಮದ್ (34) ಎಂದು ಗುರುತಿಸಲಾಗಿದೆ.
ಕಳ್ಳತನ ಮಾಡಿದ ಚಿನ್ನಾಭರಣ ಮತ್ತು ನಗದು, ಕಟ್ಟರ್ಗಳು, ಸ್ಕ್ರೂಡ್ರೈವರ್ಗಳು ಮತ್ತು ಚೂಪಾದ ಕಬ್ಬಿಣದ ರಾಡ್ ಸೇರಿದಂತೆ ಕೃತ್ಯಕ್ಕೆ ಬಳಸಲಾದ ಉಪಕರಣಗಳು, ಏಳು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಮಧ್ಯಾಹ್ನ 1 ಗಂಟೆಯಿಂದ 3 ರವರೆಗೆ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಇಲ್ಲದೆ ಬೀಗ ಹಾಕಿರುವ ಮನೆಗಳು ಮತ್ತು ಅಪಾರ್ಟ್ಮೆಂಟ್ಗಳನ್ನು ನಿರ್ದಿಷ್ಟವಾಗಿ ಗುರಿಯಾಗಿಸಿಕೊಂಡಿದ್ದರು ಎಂದು ಹೆಚ್ಚಿನ ತನಿಖೆಯಿಂದ ತಿಳಿದುಬಂದಿದೆ. ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.