ಬೆಂಗಳೂರು ಮಂಗಳೂರು ಮೂಲದ ಮಹಿಳೆಯೊಬ್ಬರು ತನ್ನ 5 ವರ್ಷದ ಮಗನನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಹುಳಿಮಾವಿನ ಬಸವನಪುರ ಎಂಬಲ್ಲಿ ನಡೆದಿದೆ. ರೋಹಿಣಿ ಶೆಟ್ಟಿ (35) ಹಾಗೂ ಅವರ ಮಗ ಸಿಯಾನ್ ಶೆಟ್ಟಿ (5) ಮೃತ ದುರ್ದೈವಿಗಳು.
12 ವರ್ಷಗಳ ಹಿಂದೆ ರೋಹಿಣಿ ಶೆಟ್ಟಿ ಪ್ರವೀಣ್ ಶೆಟ್ಟಿ ಎಂಬವರನ್ನು ವಿವಾಹವಾಗಿದ್ದರು. ತಾಯಿಯನ್ನು ಕಳೆದುಕೊಂಡಿದ್ದ ರೋಹಿಣಿ ಶೆಟ್ಟಿ ಆ ನೋವಿನಿಂದ ಕುಗ್ಗಿ ಹೋಗಿದ್ದರು ಎನ್ನಲಾಗಿದೆ. ಇದೇ ನೋವಿನಲ್ಲಿ ರೋಹಿಣಿ ಎರಡು ಮೂರು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗಿದೆ. ಇದಕ್ಕೆ ಸೂಕ್ತ ಚಿಕಿತ್ಸೆ ಕೂಡ ಕೊಡಿಸಿದ್ದರು ಪ್ರವೀಣ್. ಆದರೆ ರೋಹಿಣಿ ಚೇತರಿಸಿಕೊಂಡಿರಲಿಲ್ಲ.
ಏಪ್ರಿಲ್ 17 ರಂದು ರಾತ್ರಿ ರೋಹಿಣಿ ಶೆಟ್ಟಿ ದಂಪತಿ ಪ್ರತ್ಯೇಕ ಕೋಣೆಗಳಲ್ಲಿ ಮಲಗಿದ್ದರು. ರೋಹಿಣಿ ಹಾಗೂ ಮಗು ಒಂದು ಕೋಣೆಯಲ್ಲಿ ಮಲಗಿದ್ದರು.ಆದರೆ ಬೆಳಗ್ಗೆ ಎಷ್ಟೊತ್ತಾದರೂ ಪತ್ನಿ ಏಳದೇ ಇರೋದನ್ನು ಗಮನಿಸಿದ ಪ್ರವೀಣ್ ಶೆಟ್ಟಿ ಅನುಮಾನಗೊಂಡು ಸ್ಥಳೀಯರ ಸಹಕಾರದಿಂದ ರೂಮಿನ ಬಾಗಿಲು ಒಡೆದು ನೋಡಿದ್ದಾರೆ. ನೋಡಿದಾಗ ರೋಹಿಣಿ ಫ್ಯಾನಿಗೆ ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರೋದು ಗೊತ್ತಾಗಿದೆ. ಮಗನನ್ನು ಕೊಂದು ಬಳಿಕ ರೋಹಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಮೃತ ರೋಹಿಣಿ ಶೆಟ್ಟಿ ಸಹೋದರಿ ಮೋಹಿನಿ ಹುಳಿಮಾವು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.