ಮಂಗಳೂರಿನ ಕ್ಯಾಥೊಲಿಕ್ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಸಾಲ ಪಡೆದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರು ಹೊರವಲಯದ ಫೆರ್ಮಾಯಿ ಎಂಬಲ್ಲಿ ನಡೆದಿದೆ.ಫೆರ್ಮಾಯಿ ನಿವಾಸಿ ಮನೋಹರ್ ಪಿರೇರಾ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ಮನೋಹರ್ ಪಿರೇರಾ ಮಂಗಳೂರಿನ ಕ್ಯಾಥೊಲಿಕ್ ಸಹಕಾರಿ ಬ್ಯಾಂಕ್ ನಲ್ಲಿ 15 ಲಕ್ಷ ಸಾಲ ಪಡೆದಿದ್ದರು, ಬಳಿಕ ಅವರಿಗೆ ಆರೋಗ್ಯದಲ್ಲಿ ಸಮಸ್ಯೆ ಬಂದು ಪ್ಯಾರಾಲಿಸಿಸ್ ಆಗಿ ಕಾಲು ಊನಗೊಂಡಿತ್ತು, ಬಳಿಕ ಕೋವಿಡ್ ಕಾರಣದಿಂದ ಅವರಿಗೆ ಸಾಲ ತೀರಿಸಲು ಸಾಧ್ಯವಾಗಿರಲಿಲ್ಲ. ಈ ಕಾರಣಕ್ಕೆ ಎರಡು ವರ್ಷಗಳ ಹಿಂದೆ ಮನೆಯನ್ನು ಬ್ಯಾಂಕ್ ಸೀಜ್ ಮಾಡಿತ್ತು. ಬಳಿಕ ಮನೋಹರ್ ಸಾಲ ತೀರಿಸಲು ಚಾರಿಟಿ ಸಂಸ್ಥೆಯಿಂದ 15 ಲಕ್ಷ ಮೊತ್ತವನ್ನು ಸೆಲ್ಫ್ ಚೆಕ್ ಮೂಲಕ ಬ್ಯಾಂಕಿಗೆ ನೀಡಿದ್ದರು ಎಂದು ಹೇಳಲಾಗಿದೆ. ಆದರೆ ಈ ಸೆಲ್ಫ್ ಚೆಕ್ ನಲ್ಲಿ ನೀಡಿದ್ದ ಮೊತ್ತವನ್ನು ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಸಾವಿಗೂ ಮುನ್ನ 9 ಲಕ್ಷ ಹಣವನ್ನು ಅನಿಲ್ ಲೋಬೊ ತಿಂದಿದ್ದಾಗಿ ಮನೋಹರ್ ಹೇಳಿಕೆ ನೀಡಿದ್ದಾರೆ. ಅಲ್ಲದೆ ಮತ್ತಷ್ಟು ಹಣ ಕಟ್ಟಲು ಒತ್ತಡ ಹಾಕಿದ್ದು, ಇದರಿಂದ ಮಾನಸಿಕ ಕಿರುಕುಳ, ಜಿಗುಪ್ಸೆಯಿಂದ ಮಂಗಳೂರು ಹೊರವಲಯದ ಉಳಾಯಿಬೆಟ್ಟಿನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೀಗ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ವಿರುದ್ಧ ಮಂಗಳೂರಿನ ಕಂಕನಾಡಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಮನೋಹರ್ ಪಿರೇರಾ ಅವರ ತಮ್ಮ ಜೀವನ್ ಪಿರೇರಾ ನೀಜಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.