ಮಂಗಳೂರು: ಉಳ್ಳಾಲದ ಪಶ್ಚಿಮ ಭಾಗದ ಸಮುದ್ರದಲ್ಲಿ ಸೋಮವಾರ ಸಂಜೆ ಸಂಭವಿಸಿದ ಬೋಟ್ ದುರಂತದ ವೇಳೆ ನಾಪತ್ತೆಯಾಗಿದ್ದ ಆರು ಮಂದಿ ಮೀನುಗಾರರ ಪೈಕಿ ನಿನ್ನೆ ಮದ್ಯಾಹ್ನ ಇಬ್ಬರ ಮೃತದೇಹ ಪತ್ತೆಯಾಗಿತ್ತು. ಇಂದು ನಡೆದ ತೀವ್ರ ರಕ್ಷಣಾ ಕಾರ್ಯಾಚರಣೆಯ ಬಳಿಕ ಮತ್ತೊಬ್ಬ ಮೀನುಗಾರನ ಮೃತದೇಹವನ್ನು ಮೇಲೆತ್ತಲಾಗಿದೆ. ಉಳಿದವರಿಗಾಗಿ ಶೋಧ ನಡೆಸಲಾಗುತ್ತಿದೆ.
ಬೊಕ್ಕಪಟ್ಣ ನಿವಾಸಿಗಳಾದ ಪಾಂಡುರಂಗ ಸುವರ್ಣ(58), ಪ್ರೀತಂ(25), ಬೆಂಗ್ರೆ ನಿವಾಸಿ ಚಿಂತನ್(21) ಎಂಬವರ ಮೃತದೇಹ ಪತ್ತೆಯಾಗಿದೆ. ಕಸಬ ಬೆಂಗ್ರೆ ನಿವಾಸಿಗಳಾದ ಮುಹಮ್ಮದ್ ಹಸೈನಾರ್(28), ಮುಹಮ್ಮದ್ ಅನ್ಸಾರ್(32), ಝಿಯಾವುಲ್ಲಾ(36) ಎಂಬವರ ಪತ್ತೆಗೆ ಶೋಧ ಮುಂದುವರೆಸಲಾಗಿದೆ.
ಬೋಳಾರದ ಶ್ರೀರಕ್ಷಾ ಎಂಬ ಬೋಟ್ ನಲ್ಲಿ, ಮಂಗಳೂರು ಮೀನುಗಾರಿಕಾ ಬಂದರಿನಿಂದ ಆಳ ಸಮುದ್ರದ ಮೀನುಗಾರಿಕೆಗೆ ನ. 30ರ ಸೋಮವಾರ ಈ ಬೋಟ್ ತೆರಳಿತ್ತು. ಮೀನು ತುಂಬಿಕೊಂಡು ವಾಪಸ್ ಬರುವಾಗ ಗಾಳಿಗೆ ಮಗುಚಿಕೊಂಡು ಬಿದ್ದಿದೆ. ದುರಂತದ ಸಂದರ್ಭದಲ್ಲಿ ದೋಣಿಯಲ್ಲಿದ್ದ 16 ಮಂದಿ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಆರು ಮಂದಿ ಮೀನುಗಾರರು ನಾಪತ್ತೆಯಾಗಿದ್ದು, ಈ ಪೈಕಿ ಮೂವರ ಮೃತದೇಹ ಪತ್ತೆಯಾಗಿದೆ. ನಾಪತ್ತೆಯಾದವರ ಪತ್ತೆಗೆ ಕರಾವಳಿ ರಕ್ಷಣಾ ಪಡೆ ಕಾರ್ಯಾಚರಣೆ ನಡೆಸುತ್ತಿದೆ.