ಮಂಗಳೂರು: 2010 ಮೇ 22ರ ಮುಂಜಾನೆ ದುಬೈಯಿಂದ ಮಂಗಳೂರಿನ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಟ ವಿಮಾನ ಇನ್ನೇನು ಲ್ಯಾಂಡಿಂಗ್ ಮಾಡಲಿದೆ ಅನ್ನುವಷ್ಟರಲ್ಲಿ ರನ್ವೆವೇಯಿಂದ ಜಾರಿ ನಿಯಂತ್ರಣ ತಪ್ಪಿ ಸಂಭವಿಸಿದ ಭಾರಿ ದುರಂತಕ್ಕೆ ಇಂದು ಭರ್ತಿ 11 ವರ್ಷ ತುಂಬಿಕೊಳ್ಳುತ್ತಿದೆ.
ಈ ಮಹಾ ದುರಂತದಲ್ಲಿ 166 ಪ್ರಯಾಣಿಕರ ಪೈಕಿ 158 ಮಂದಿ ಮೃತಪಟ್ಟಿದ್ದರು. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನ ಪತನ ದೇಶ ಕಂಡ ಅತಿ ದೊಡ್ಡ ವಿಮಾನ ದುರಂತವಾಗಿದೆ. 158 ಮಂದಿಯ ಹಾಗೂ ಅವರ ಕುಟುಂಬದವರ ಕನಸುಗಳು ಕಮರಿ ಹೋಗಿತ್ತು. ಕೆಂಜಾರಿನಲ್ಲಿರುವ ವಿಮಾನ ನಿಲ್ದಾಣದಲ್ಲಿ ಬೆಳ್ಳಂಬೆಳಗ್ಗೆ ಸಂಭವಿಸಿದ ದುರಂತದಲ್ಲಿ ಎಂಟು ಮಂದಿ ಮಾತ್ರ ಬದುಕುಳಿದಿದ್ದರು.
ರನ್ವೇಯಲ್ಲಿ ವಿಮಾನ ಇಳಿಯುತ್ತಿದ್ದಂತೆ ನಿಯಂತ್ರಣ ತಪ್ಪಿ ವಿಮಾನ ರನ್ವೇ ಬಿಟ್ಟು ಹೊರಕ್ಕೆ ಹೋಗಿ ನೇರವಾಗಿ ವಿಮಾನ ನಿಲ್ದಾಣದ ಆವರಣ ಗೋಡೆಯ ಫ್ಯಾನ್ಗೆ ಢಿಕ್ಕಿ ಹೊಡೆದು ಗುಡ್ಡೆಯಿಂದ ಕೆಳಗುರುಳಿತ್ತು. ಇದೇ ಸಂದರ್ಭದಲ್ಲಿ ಬೆಂಕಿ ಹೊತ್ತಿಕೊಂಡು ಸುಟ್ಟು ಭಸ್ಮವಾಗಿತ್ತು. ದುರಂತದಲ್ಲಿ ಮಡಿದವರ ಹಲವರ ಕುಟುಂಬಕ್ಕೆ ಈಗಲೂ ಪರಿಹಾರ ಧನ ಸಿಗಲಿಲ್ಲ ಎಂಬುದು ಅಷ್ಟೇ ಬೇಸರದ ಸಂಗತಿ.