ಕಾಸರಗೋಡು: ಸ್ನಾನ ಮಾಡುತ್ತಿದ್ದ ವೇಳೆ ನೀರು ಪಾಲಾಗಿದ್ದ ಮಂಗಳೂರು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಮಧೂರು ಬಳಿ ನಡೆದಿದೆ. ಮೃತರನ್ನು ಮಂಗಳೂರು ಎಕ್ಕೂರಿನ ನಿವಾಸಿ ವಿನೋದ್ ( 35 ) ಎಂದು ಗುರುತಿಸಲಾಗಿದೆ.
ಆದಿತ್ಯವಾರ ಸಂಜೆ ಘಟನೆ ನಡೆದಿತ್ತು . ಮಧೂರಿನ ತೋಟವೊಂದರಲ್ಲಿ ಕೆಲಸ ನಿರ್ವಹಿಸಿ ಮಧೂರು ಸೇತುವೆ ಬಳಿಯ ಹೊಳೆ ಯಲ್ಲಿ ಸ್ನಾನ ಕ್ಕಿಳಿದ ಸಂದರ್ಭದಲ್ಲಿ ಕೊಚ್ಚಿಕೊಂಡು ಹೋಗಿದ್ದು , ಇದನ್ನು ಗಮನಿಸಿದ ಪ್ರತ್ಯಕ್ಷದರ್ಶಿಗಳು ಪೊಲೀಸ್ , ಅಗ್ನಿಶಾಮಕ ದಳದ ಸಿಬಂದಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿ ಶೋಧ ನಡೆಸಿದರೂ ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ . ಎರಡು ದಿನಗಳ ಬಳಿಕ ಮಧೂರು ಹೊಳೆ ಬದಿಯಿಂದ ಮೃತದೇಹ ಪತ್ತೆಯಾಗಿದೆ.
ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದ್ದು, ಕೋವಿಡ್ ತಪಾಸಣೆಯ ವರದಿ ಬಳಿಕ ಮರಣೋತ್ತರ ಪರೀಕ್ಷೆ ನಡೆಸಲಿದೆ.
ವಿನೋದ್ ಆಗಮಿಸಿದ್ದ ಬೈಕ್ ಸೇತುವೆ ಮೇಲೆ ನಿಲ್ಲಿಸಿದ್ದು , ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಅವಿವಾಹಿತನಾಗಿದ್ದ ವಿನೋದ್ ಮಧೂರು ಕೊಲ್ಯದಲ್ಲಿರುವ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದರು ಎನ್ನಲಾಗಿದೆ.