ಮಂಗಳೂರು: ತಾಲಿಬಾನ್ ಉಗ್ರರ ವಶವಾಗಿರುವ ಅಷ್ಘಾನಿಸ್ತಾನದಲ್ಲಿ ದ.ಕ. ಮತ್ತು ಶಿವಮೊಗ್ಗ ಮೂಲದ ಇಬ್ಬರು ಪಾದ್ರಿಗಳು ಸಿಲುಕಿಕೊಂಡಿದ್ದು, ಇಲ್ಲಿರುವ ಅವರ ಕುಟುಂಬಸ್ಥರು ತೀವ್ರ ಆತಂಕಕ್ಕೀಡಾಗಿದ್ದಾರೆ..
ಸಿದ್ದಕಟ್ಟೆಯ ಫಾದರ್ ಜೆರೊಮ್ ಸಿಕ್ವೆರಾ ಮತ್ತು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಫಾದರ್ ಪಿ ರಾಬರ್ಟ್ ರೋಡ್ರಿಗಸ್ ಎಂಬ ಇಬ್ಬರು ಜೆಸ್ಕೂಟ್ ಪಾದ್ರಿಗಳು ಅಫ್ಘಾನಿಸ್ತಾನದಲ್ಲಿ ಸಿಲುಕಿಹಾಕಿಕೊಂಡಿರುವವರು. ಫಾದರ್ ಜೆರೊಮೆಯವರು ನಿನ್ನೆ ಸಂದೇಶ ಮೂಲಕ ಸಂಪರ್ಕಕ್ಕೆ ಸಿಕ್ಕಿ ತಾವು ಸುರಕ್ಷಿತವಾಗಿದ್ದೇವೆ ಎಂದು ಹೇಳಿದ್ದಾರೆ, ಆದರೆ ಅವರ ಕುಟುಂಬಸ್ಥರು ಅಲ್ಲಿನ ಪರಿಸ್ಥಿತಿ ಕಂಡು ಚಿಂತೆಗೀಡಾಗಿದ್ದಾರೆ.
ಜೆರೋಮ್ ಸಿಕ್ವೇರಾ ಅವರು ಕಾಬೂಲ್ನಲ್ಲಿರುವ ಅಂತಾರಾಷ್ಟ್ರೀಯ ಎನ್ಜಿಒವೊಂದರ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ತಾಲಿಬಾನಿಗಳು ದೇಶವನ್ನು ವಶಕ್ಕೆ ಪಡೆದ ಬಳಿಕ ತಮ್ಮ ಸಹೋದರ ವಿನ್ಸೆಂಟ್ ಸಿಕ್ವೇರಾ ಜತೆ ದೂರವಾಣಿಯಲ್ಲಿ ಮಾತನಾಡಿದ ಅವರು, ಕಾಬೂಲ್ ಬಳಿಯ ಸ್ಥಳದಲ್ಲಿ ಉಳಿದುಕೊಂಡಿರುವುದಾಗಿ ತಿಳಿಸಿದ್ದಾರೆ. ಇದೀಗ ಅವರನ್ನು ವಾಪಸ್ ಭಾರತಕ್ಕೆ ಕರೆತರುವ ನಿಟ್ಟಿನಲ್ಲಿ ಕುಟುಂಬಸ್ಥರು ಪ್ರಯತ್ನ ಮುಂದುವರಿಸಿದ್ದಾರೆ.
ಜೆರೋಮ್ ಅವರು ಭಾನುವಾರ ಬೆಳಗ್ಗೆ ಕಾಬೂಲ್ ವಿಮಾನ ನಿಲ್ದಾಣ ತಲುಪಿದ್ದು,ಆ ಹೊತ್ತಿಗಾಗಲೇ ತಾಲಿಬಾನ್ ಉಗ್ರರು ವಿಮಾನ ನಿಲ್ದಾಣವನ್ನು ವಶಪಡಿಸಿಕೊಂಡಿದ್ದರು. ದೊಡ್ಡ ಮಟ್ಟದ ಜನಸಂದಣಿ ಸೇರಿತ್ತು. ತಾಲಿಬಾನ್ ಉಗ್ರರು ಗಾಳಿಯಲ್ಲಿ ಗುಂಡು ಹಾರಿಸುತ್ತಾ ಗುಂಪನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದರು. ಯಾವುದೇ ಭದ್ರತಾ ತಪಾಸಣೆ ಅಥವಾ ಬೋರ್ಡಿಂಗ್ ಪಾಸ್ ಇಲ್ಲದೆ ಜನರು ವಿಮಾನಗಳನ್ನು ಹತ್ತುತ್ತಿದ್ದರು ಎಂದು ಜೆರೋಮ್ ಹೇಳಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.