ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ ಮುಂಡತ್ತೋಡಿ ಎಂಬಲ್ಲಿ ವಾಸವಿದ್ದ ಗದಗ ಮೂಲದ ವ್ಯಕ್ತಿಯೊಬ್ಬರು ತಾವಿದ್ದ ಬಾಡಿಗೆ ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕರಿಯಪ್ಪ(48) ಆತ್ಮಹತ್ಯೆಗೆ ಶರಣಾದ ದುರ್ದೈವಿ.

ವಿಪರೀತ ಕುಡಿತ ಚಟ ಹೊಂದಿದ್ದ ಕರಿಯಪ್ಪ ಕುಡಿದು ಬಂದು ಮಕ್ಕಳು ಹಾಗೂ ಪತ್ನಿಯೊಂದಿಗೆ ಪ್ರತಿದಿನ ಜಗಳವಾಡುತ್ತಿದ್ದರು. ಇದರಿಂದ ನೊಂದ ಪತ್ನಿ ದೀಪಾ ತನ್ನ ಮಕ್ಕಳನ್ನು ತಾಯಿ ಮನೆ ಗದಗಕ್ಕೆ ಕಳುಹಿಸಿದ್ದರು. ನಿನ್ನೆ ರಾತ್ರಿ ಸುಮಾರು 11 ಗಂಟೆ ವೇಳೆಗೆ ಎಂದಿನಂತೆ ಕುಡಿದು ಬಂದಿದ್ದ ಕರಿಯಪ್ಪ ಪತ್ನಿಯೊಂದಿಗೆ ಮಕ್ಕಳನ್ನು ಯಾಕೆ ತಾಯಿ ಮನೆಗೆ ಕಳುಹಿಸಿದ್ಯಾ ಎಂದು ಜಗಳ ತೆಗೆದಿದ್ದಾರೆ. ಬಳಿಕ ಕೋಣೆಗೆ ಹೋಗಿ ಚಿಲಕ ಹಾಕಿಕೊಂಡಿದ್ದಾರೆ.
ಇಂದು ಬೆಳಗ್ಗೆ 6 ಗಂಟೆಯಾದರೂ ಪತಿ ಕೋಣೆಯ ಬಾಗಿಲು ತೆಗೆಯದೇ ಇದ್ದದ್ದನ್ನು ಕಂಡು ಅನುಮಾನಗೊಂಡ ಪತ್ನಿ ದೀಪಾ, ಅಕ್ಕಪಕ್ಕದವರು ಹಾಗೂ ಮನೆಯ ಮಾಲೀಕರಿಗೆ ತಿಳಿಸಿದ್ದಾರೆ. ಅವರು ಪೊಲೀಸರಿಗೆ ಮಾಹಿತಿ ನೀಡಿ, ಅವರು ಬಂದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.