ಸುಬ್ರಮಣ್ಯ; ವ್ಯಕ್ತಿಯೊಬ್ಬರಿಗೆ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಘಟನೆ ಸುಬ್ರಹ್ಮಣ್ಯದಲ್ಲಿ ನಡೆದಿದೆ.
ಐನೆಕಿದು ಗ್ರಾಮದ ಕೂಜುಗೋಡು ನಿವಾಸಿ ಸತೀಶ್ ಕೆ.ಪಿ. (54) ಮೇ 6ರಂದು ಸತೀಶ್ ಅವರು ಸುಬ್ರಹ್ಮಣ್ಯದಿಂದ ತನ್ನ ಮನೆಗೆ ರಾತ್ರಿ ಹೋಗುತ್ತಿದ್ದ ವೇಳೆ ಐನೆಕಿದು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಳಿ ತಲುಪುತ್ತಿದ್ದಂತೆ, ಹಿಂದಿನಿಂದ ಅವರ ಕಾರನ್ನು ಬಿಳಿ ಬಣ್ಣದ ಕಾರಿನಲ್ಲಿ ಸತೀಶ್ ಅವರ ಅಣ್ಣನ ಮಗ ಮಿಥುನ್ ಓವರ್ಟೇಕ್ ಮಾಡಿ ಬಳಿಕ ಸತೀಶ್ ಅವರ ಕಾರನ್ನು ಅಡ್ಡಗಟ್ಟಿ ನಿಲ್ಲಿಸಿ, ಅವ್ಯಾಚವಾಗಿ ಬೈದು, ಸುಬ್ರಹ್ಮಣ್ಯದಲ್ಲಿರುವ ನನ್ನ ಬಿಲ್ಡಿಂಗ್ ಕಟ್ಟಡದ ನಿರ್ಮಾಣಕ್ಕೆ ತೊಂದರೆ ಮಾಡುತ್ತೀಯಾ ಎಂದು ಹೇಳಿ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ವೇಳೆ ಸತೀಶ್ ಅವರು ಜೋರಾಗಿ ಬೊಬ್ಬೆ ಹೊಡೆದಿದ್ದು, ಆರೋಪಿ ಮಿಥುನ್ ಅವರು ಸತೀಶ್ ಅವರನ್ನು ಉದ್ದೇಶಿಸಿ ಜೀವ ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಹಲ್ಲೆಯಿಂದ ಗಾಯಗೊಂಡ ಸತೀಶ್ ಅವರನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.