ಮಂಗಳೂರು: ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ‘ಪಾಕಿಸ್ತಾನದ ಕುನ್ನಿಗಳೇ ಎಂದಿದ್ದಕ್ಕೆ ಪ್ರಚೋದನೆಯಾಗಿದ್ದರೆ ಅಂತಹವರನ್ನು ಪಾಕಿಸ್ತಾನಕ್ಕೆ ಗಡಿಪಾರು ಮಾಡಿ. ಹೊರಗಿನವರ ಹಸ್ತಕ್ಷೇಪ ಬೇಡ,’ ಎಂದು ಹೇಳಿಕೆ ನೀಡಿದ್ದರು. ಹಾಗಾದರೆ ಅವರೇ ಮುಂದಾಗಿ ಪಾಕಿಸ್ತಾನದ ಕುನ್ನಿಗಳನ್ನು ಗಡಿಪಾರು ಮಾಡಿಸಲಿ ಎಂದು ಪರಿಷತ್ ಸದಸ್ಯ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದರು.
ಬೊಳಿಯಾರಿನಲ್ಲಿ ಬಿಜೆಪಿ ವಿಜಯೋತ್ಸವ ವೇಳೆ ಬಿಜೆಪಿ ಕಾರ್ಯಕರ್ತರ ಮೇಲೆ ಮುಸ್ಲಿಮರಿಂದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ಭಾರತ್ ಮಾತಾ ಕೀ ಜೈ ಎನ್ನುವುದನ್ನು ಸಹಿಸಲಾಗದು ಎಂದರೆ ಏನರ್ಥ? ಪಾಕಿಸ್ತಾನದ ಕುನ್ನಿಗಳೇ ಎನ್ನುವುದನ್ನು ತಮಗೇ ಎಂದು ಕೆಲವರು ಅರ್ಥೈಸಿಕೊಂಡಿದ್ದು ಯಾಕೆ,’ ಎಂದು ಪ್ರಶ್ನಿಸಿದರು.
ರಾಜ್ಯ ಸರಕಾರ ಅಸ್ತಿತ್ವಕ್ಕೆ ಬಂದು 13 ತಿಂಗಳಾಗಿದ್ದು, ರಾಜ್ಯದಲ್ಲಿ ಹತ್ಯೆ ಮತ್ತು ಆತ್ಮಹತ್ಯೆಗಳಲ್ಲಿ ದಾಖಲೆ ಮುರಿಯುತ್ತಿದೆ. ಎನ್ಸಿಆರ್ಬಿ ದಾಖಲೆ ಪ್ರಕಾರ ನಾಲ್ಕು ತಿಂಗಳಲ್ಲಿ 500ಕ್ಕೂ ಹೆಚ್ಚು ಹತ್ಯೆ, 700ಕ್ಕೂ ಹೆಚ್ಚು ಆತ್ಮಹತ್ಯೆ ನಡೆದಿದೆ. ಕ್ರಿಮಿನಲ್ಗಳಿಗೆ ಭೀತಿ ಇಲ್ಲ, ಕಮ್ಯುನಲ್ಗಳ ಬಗ್ಗೆ ಸರಕಾರ ಮೃದುಧೋರಣೆ ತಳೆದಿದೆ ಎಂದು ಸಿಟಿ ರವಿ ಆರೋಪಿಸಿದರು.