ಬೆಳ್ತಂಗಡಿ: ಪುದುವೆಟ್ಟು ಗ್ರಾಮದ ಎಟ್ಯೋಡು ಶೇಖರ ಗೌಡರವರ ಪುತ್ರ ವಾಣಿ ಕಾಲೇಜಿನ ಉಪನ್ಯಾಸಕ ನಂದ ಕುಮಾರ್ (36 ವ.) ಇವರು ಕೆಲ ಕಾಲದ ಅಸೌಖ್ಯದಿಂದ ಬಳಲಿ ಚಿಕಿತ್ಸೆಗೆ ಸ್ಪಂದಿಸದೆ ಮೇ 3ರಂದು ನಿಧನರಾದರು.
1987ರ ನ.23ರಂದು ಜನಿಸಿದ ಇವರು ಉಜಿರೆ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಯಲ್ಲಿ ತನ್ನ ಶಿಕ್ಷಣವನ್ನು ಪೂರೈಸಿದ್ದು, ಬಳಿಕ ಬೆಳ್ತಂಗಡಿ ಹಳೆಕೋಟೆಯಲ್ಲಿರುವ ವಾಣಿ ಶಿಕ್ಷಣ ಸಂಸ್ಥೆಯಲ್ಲಿ 2010 ರಲ್ಲಿ ಪದವಿ ಪೂರ್ವ ವಿಭಾಗದಲ್ಲಿ ವಾಣಿಜ್ಯ ವಿಭಾಗದ ಉಪನ್ಯಾಸಕರಾಗಿ ತಮ್ಮ ಸೇವೆಯನ್ನು ಪ್ರಾರಂಭಿಸಿದ್ದರು. 14 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿದ ಇವರು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಉಪನ್ಯಾಸಕರಲ್ಲಿ ಓರ್ವರಾಗಿದ್ದರು.
ಇತ್ತೀಚೆಗೆ ಅವರಿಗೆ ಕಾಣಿಸಿಕೊಂಡ ದೊಡ್ಡಕರುಳು ಮತ್ತು ಮೇದೋಜೀರಕ ಗ್ರಂಥಿಯ ಸಮಸ್ಯೆಯಿಂದಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಹಲವು ದಿನಗಳ ಕಾಲ ಚಿಕಿತ್ಸೆ ಪಡೆದರೂ ಫಲಕಾರಿಯಾಗದೆ ಮೇ 3ರಂದು ಕೊನೆಯುಸಿರೆಳೆದರು.
ಅವರ ಸಹೋದ್ಯೋಗಿಗಳು, ವಿದ್ಯಾರ್ಥಿಗಳು, ಊರವರು ಹಾಗೂ ಬಂಧು ಬಳಗದವರು ಅವರನ್ನು ಉಳಿಸಿಕೊಳ್ಳಲು ತಮ್ಮಿಂದಾದ ಸಹಾಯವನ್ನು ಮಾಡಿ ದೇವರಲ್ಲಿ ಪ್ರಾರ್ಥಿಸಿದರೂ ಕೊನೆಗೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.ಮೃತರು ತಂದೆ, ತಾಯಿ, ಪತ್ನಿ ದಿವ್ಯಾ, ಇಬ್ಬರು ಹೆಣ್ಣು ಮಕ್ಕಳು, ಕುಟುಂಬಸ್ಥರು ಹಾಗೂ ಸಹೋದ್ಯೋಗಿಗಳು ಮತ್ತು ಅಪಾರ ಸಂಖ್ಯೆಯ ವಿದ್ಯಾರ್ಥಿ ಬಳಗವನ್ನು ಅಗಲಿದ್ದಾರೆ.ಮೃತರ ಅಂತ್ಯ ಸಂಸ್ಕಾರವು ಇಂದೇ (ಮೇ.3) ರಾತ್ರಿ 9 ಗಂಟೆಗೆ ನಡೆಯಲಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.