ಕಾಸರಗೋಡು: ರೈಲು ಹಳಿಯಲ್ಲಿ ಕಾಂಕ್ರೀಟ್ ತುಂಡುಗಳನ್ನು ಇಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಮಿಳುನಾಡು ಮೂಲದ ಮಹಿಳೆಯನ್ನು ರೈಲ್ವೆ ಭದ್ರತಾ ಪಡೆ ಹಾಗೂ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.ತಮಿಳುನಾಡಿನ ವಿಲ್ಲಾಪುರದ ಕನಕವಳ್ಳಿ (22) ಬಂಧಿತೆ.
ಈಕೆ ಗುಜರಿ ಹೆಕ್ಕುವ ಕಾಯಕ ನಡೆಸುತ್ತಿದ್ದು, ಸಿಮೆಂಟ್ ಒಳಗೊಂಡ ಕಬ್ಬಿಣದ ಸರಳಿನಿಂದ ಸಿಮೆಂಟ್ ಬೇರ್ಪಡಿಸುವ ಉದ್ದೇಶದಿಂದ ರೈಲು ಹಳಿಯಲ್ಲಿ ಇಟ್ಟಿದ್ದಾಗಿ ವಿಚಾರಣೆ ವೇಳೆ ತಿಳಿಸಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಂಗಳವಾರ ಸಂಜೆ ಹಳಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಈಕೆಯನ್ನು ಗಮನಿಸಿದ ಪೊಲೀಸರು ವಿಚಾರಣೆ ನಡೆಸಿದಾಗ ಕೃತ್ಯ ನಡೆಸಿರುವುದನ್ನು ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಆ. 21ರಂದು ಕಾಸರಗೋಡು – ಕಾಂಞಗಾಡು ಮಧ್ಯೆ ಹಾದುಹೋಗುವ ಹಳಿಗಳಲ್ಲಿ ಕೋಟಿಕುಳಂ-ಬೇಕಲ ನಡುವೆ ಮೊದಲು ಈ ದುಷ್ಕೃತ್ಯ ನಡೆಸಲಾಗಿತ್ತು. ತೃಕ್ಕನ್ನಾಡ್ ದೇಗುಲದ ಹಿಂದೆ ರೈಲ್ವೆ ಹಳಿಗಳ ಮೇಲೆ ಕಬ್ಬಿಣದ ಸರಳುಗಳು, ಬೀಮ್ ಪತ್ತೆಯಾಗಿತ್ತು. ರೈಲ್ವೆ ಗಾರ್ಡ್ ಸಮಯಪ್ರಜ್ಞೆಯಿಂದ ದೊಡ್ಡ ದುರಂತ ತಪ್ಪಿದೆ.