ಕಡಬ: ಬೆಳಂದೂರಿನ ಗುಂಡಿನಾರಿನಲ್ಲಿ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಕಡಬ ತಾಲೂಕಿನ ಬೆಳಂದೂರಿನ ಮೊಹಮ್ಮದ್ ನಿಜಾರ್(25) ಹಾಗೂ ಬಜ್ಪೆಯ ಅಬ್ದುಲ್ ಮುನೀರ್ (28) ಬಂಧಿತರು ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಕಾರು, ಕಳವಾದ ಸೊತ್ತುಗಳನ್ನು ಬೆಳ್ಳಾರೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಫೆ.6-ಫೆ.7ರ ನಡುವಿನಲ್ಲಿ ಬೆಳಂದೂರು ಗ್ರಾಮದ ಗುಂಡಿನಾರು ಎಂಬಲ್ಲಿ ಮನೆಯವರು ರಾತ್ರಿ ಕಾರ್ಯಕ್ರಮಕ್ಕೆಂದು ಹೊರಗೆ ಹೋಗಿದ್ದ ಮನೆಯಲ್ಲಿನ ಮುಂಬಾಗಿಲು ಮುರಿಯಲು ಯತ್ನಿಸಿ, ಬಳಿಕ ಹಿಂಬಾಗಿಲು ಮುರಿದು ಒಳನುಗ್ಗಿದ್ದ ಕಳ್ಳರು ಒಟ್ಟು ರೂ.1.43 ಲಕ್ಷ ಮೌಲ್ಯದ ಚಿನ್ನಭರಣ ಕಳವು ನಡೆಸಿದ್ದರು. ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಜಿಲ್ಲಾ ಪೊಲೀಸರ ನಿರ್ದೇಶನದಂತೆ ಪುತ್ತೂರು ಉಪವಿಭಾಗ ಡಿವೈಎಸ್ಪಿ, ಸುಳ್ಯ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ ಅವರ ಮಾರ್ಗದರ್ಶನದಲ್ಲಿ ಪ್ರಕರಣದ ತನಿಖೆ ನಡೆಸಿದ ಬೆಳ್ಳಾರೆ ಪೊಲೀಸ್ ಎಸೈ ಈರಯ್ಯ ನೇತೃತ್ವದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.