ಕಡಬ: ಸೌದಿ ಅರೇಬಿಯಾದಲ್ಲಿ ಹಲವಾರು ವರ್ಷಗಳಿಂದ ದುಡಿಯುತ್ತಿದ್ದ ಕಡಬದ ಹರೀಶ್ ಪೈ ಗೋಕುಲ್ ದಾಸ್ ಎಂಬವರು ಆಗಸ್ಟ್ 27ರಂದು ರಿಯಾದ್ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಅವರು ಸೌದಿ ಅರೇಬಿಯಾದ ಪ್ರತಿಷ್ಠಿತ ನಜ್ದ್ ವಿಲೇಜ್ ಎಂಬ ಕಂಪನಿಯಲ್ಲಿ ವ್ಯವಸ್ಥಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಮೃತದೇಹವನ್ನು ಊರಿಗೆ ತರಲು ಸಹಕರಿಸಬೇಕೆಂದು ಕುಟುಂಬ ಸದಸ್ಯರು ಸೌದಿ ಅರೇಬಿಯಾ ಘಟಕದ ISF ಕಾರ್ಯಕರ್ತ ನೌಶಾದ್ ಕಡಬರವರ ಮೂಲಕ ಮನವಿಯನ್ನು ಸಲ್ಲಿಸಿದ್ದು ಅದರಂತೆ ಕೂಡಲೇ ಕಾರ್ಯ ಪ್ರವೃತ್ತರಾದ ಇಂಡಿಯನ್ ಸೋಶಿಯಲ್ ಫಾರಂ(ISF) ಸದಸ್ಯರು ಅದಕ್ಕೆ ಬೇಕಾದ ಕಾನೂನು ಪ್ರಕ್ರಿಯೆಗಳನ್ನು ಆರಂಭಿಸಿದ್ದಾರೆ.
ಸೆ.8 ಗುರುವಾರ ದಂದು ಮೃತದೇಹ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ . ಕಾನೂನು ಸಹಾಯ ತಂಡದಲ್ಲಿ ISF ಸೌದಿ ಅರೇಬಿಯಾ ಘಟಕದ ಸದಸ್ಯರಾದ ನೌಶಾದ್ ಕಡಬ,ಅಶ್ಫಾಕ್ ಉಚ್ಚಿಲ, ನಿಝಾಮ್ ಬಜ್ಪೆ ಹಾಗೂ ಇಜಾಝ್ ಫರಂಗಿಪೇಟೆ ಸಹಕರಿಸುತ್ತಿದ್ದಾರೆ. ಭಾರತದ ಅನಿವಾಸಿ ಸಂಘಟನೆ ISF ಸದಸ್ಯರು ಧರ್ಮಾತೀತವಾಗಿ ಹಲವರ ಮೃತದೇಹಗಳನ್ನು ಊರಿಗೆ ಕಳುಹಿಸಿದ್ದು, ಈ ಮಾನವೀಯ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಅಕಾಲಿಕ ಮರಣಕ್ಕೆ ISF ರಿಯಾದ್ ಘಟಕ ಸಂತಾಪ ವ್ಯಕ್ತಪಡಿಸಿದೆ.