ಬೆಳ್ತಂಗಡಿ: ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ತಾಲೂಕು ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಬೆಳ್ತಂಗಡಿ ಪಟ್ಟಣ ಪಂಚಾಯತ್ ಸಂಯುಕ್ತಾಶ್ರಯದಲ್ಲಿ ಇಂದು ಶಿಕ್ಷಕರ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಶಾಸಕ ಹರೀಶ್ ಪೂಂಜ ಉದ್ಘಾಟಿಸಿದರು ಹಾಗು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯವಾದುದು . ನಮ್ಮ ದೇಶದಲ್ಲಿ ಇರುವ ಗುರು ಪರಂಪರೆ ಶಿಕ್ಷಣ ಪದ್ಧತಿ ಬೇರೆ ಎಲ್ಲೂ ಇಲ್ಲ. ಈ ರೀತಿಯ ಶಿಕ್ಷಣ ಇತಿಹಾಸ ನೀಡಿರುವುದು ನಮ್ಮ ಭಾರತೀಯ ಪರಂಪರೆಯ ಶ್ರೇಷ್ಠತೆಯನ್ನು ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದರು.
ಆಧ್ಯಾತ್ಮಕ ಚಿಂತನೆಯನ್ನು ನೀಡಿರುವುದು ನಮ್ಮ ದೇಶ ಮತ್ತು ನಮ್ಮ ಶಿಕ್ಷಕರು. ಗ್ರಾಮೀಣ ಪ್ರದೇಶದ ತಾಲೂಕಿನಲ್ಲಿ ಎಳನೀರು ಶಾಲೆಯ ಶಿಕ್ಷಕ ರವೀಂದ್ರ ಮಲವಂತಿಗೆ ಕಜಕ್ಕೆ ಶಾಲೆಯ ಗ್ರಾಮದ ಕುಮಾರಸ್ವಾಮಿ, ಮರೋಳಿ ಗ್ರಾಮದ ಕೂಕ್ರಬೆಟ್ಟು ಶಾಲೆಯ ಸುಫಲಾ ಇವರು ಸುಮಾರು ಹತ್ತು ವರ್ಷಕ್ಕೂ ಹೆಚ್ಚು ಇದೇ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ, ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಿ ಮಾದರಿಯಾಗಿದ್ದಾರೆ ಎಂದ ಅವರು, ನಾನು ಈ ಹಂತದಲ್ಲಿ ಇರಲು ನಾನು ಕಲಿತ ಶಾಲೆಯ ಶಿಕ್ಷಕರೇ ಪ್ರಮುಖ ಕಾರಣರಾಗಿದ್ದಾರೆ ಎಂದು ಹೇಳಿದರು.
ಈ ಸಮಯದಲ್ಲಿ ಮುಖ್ಯ ಅತಿಥಿ, ನಾವೂರು ಆರೋಗ್ಯ ಕ್ಲಿನಿಕ್ ನ ಡಾ. ಪ್ರದೀಪ್ ಮಾತನಾಡಿ, ಇಡೀ ದೇಶಕ್ಕೆ ಶಿಕ್ಷಕರು ಹೇಗಿರಬೇಕೆಂದು ಮಾದರಿಯಾದವರು ಡಾ. ಸರ್ವಪಲ್ಲಿ ರಾಧಾಕೃಷ್ಣನ್. ಕೇವಲ ಶಿಕ್ಷಣ ಕ್ಷೇತ್ರ ಮಾತ್ರವಲ್ಲದೆ ಸ್ವಾತಂತ್ರ್ಯ ಸಂಗ್ರಾಮದಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ರಾಜಕೀಯ ಮುಖವಾಡ ಧರಿಸದ ವ್ಯಕ್ತಿತ್ವ ರಾಧಾಕೃಷ್ಣನ್ ಅವರನ್ನು ಒಬ್ಬ ಶಿಕ್ಷಕ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎಂದು ಇಡೀ ದೇಶಕ್ಕೆ ತೋರಿಸಿದರು. ಗುರು ಶಿಷ್ಯರ ಸಂಬಂಧ ಹೇಗಿರಬೇಕು ಎಂದು ರಾಧಾಕೃಷ್ಣನ್ ತೋರಿಸಿಕೊಟ್ಟರು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಹೆಚ್.ಎಸ್, ಪಟ್ಟಣ ಪಂಚಾಯಿತಿ ರಜನಿ ಕುಡ್ಯ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಪ್ರೌಢ ಶಾಲಾ ಶಿಕ್ಷಕರ ಸಂಘ, ಶಿಕ್ಷಕರ ವಿವಿಧ ಸಂಘಟನೆಯ ಅಧ್ಯಕ್ಷರು, ಪದಾಧಿಕಾರಿಗಳು, ಸರಕಾರಿ ನೌಕರ ಸಂಘದ ಅಧ್ಯಕ್ಷರು, ನಿರ್ದೇಶಕರು ಉಪಸ್ಥಿತರಿದ್ದರು.
ರಾಷ್ಟ್ರ ಪುಶಸ್ತಿ ಶಿಕ್ಷಕ ಪುರಸ್ಕೃತ ಯಾಕೂಬ್ ಎಸ್., ಜಿಲ್ಲಾ ಪ್ರಶಸ್ತಿ ಶಿಕ್ಷಕ ಪುರಸ್ಕೃತರಾದ ಅಕ್ಕಮ್ಮ, ಸಬೀನಾ, ಚೈತ್ರಪ್ರಭಾ ಅವರನ್ನು ಹಾಗೂ ಮೂವತ್ತೊಂದು ಮಂದಿ ನಿವೃತ್ತ ಶಿಕ್ಷಕರು ಹಾಗೂ ಸಿಬ್ಬಂದಿಗಳನ್ನು ಈ ಸಂದರ್ಭ ಸನ್ಮಾನಿಸಿ ಗೌರವಿಸಲಾಯಿತು. ನಿವೃತ್ತ ಶಿಕ್ಷಕರಾದ ಪ್ರಪುಲ್ಲ, ಸರೋಜಿನಿ ಗೀತಾ ಕುಮಾರಿ ಕೆ, ಜ್ಯೋತಿ ಎಮ್.ಎಸ್., ವಿಮಲಾ ಕುಮಾರಿ, ಕೆ ರೂಪಾವತಿ ಪಿ.ಎ., ವಾರಿಜಾ ಪಿ, ಚಂದ್ರಿಕಾ ಎಮ್, ಜಯಭಾರತಿ, ಕಮಲ ಕೆ , ಫ್ಲೋಸಿ ಎಮ್, ತೆರೆಜಾ ಡಯಾಸ್, ಜೆಸಿಂತಾ, ರಾಜೇಶ್ವರಿ, ಅಜಿತ ಕುಮಾರಿ, ಅನಂತ್ ರಾಮ್ ನೂರಿತ್ತಾಯ, ವಿಷ್ಣುಮೂರ್ತಿ, ಜೆರಾಲ್ಡ್ ಫೆರ್ನಾಂಡೀಸ್, ವಿಶ್ವನಾಥ್ ಶೆಟ್ಟಿ, ಚಂದ್ರಿಕಾ, ಕರುಣಾಕರ್ ಜೆ. ಉಚ್ಚಿಲ್, ಹಿಲ್ಡಾ ಮೋರಾಸ್, ಚಿನ್ನಯ ಗೌಡ, ಫಿಲೋಮಿನಾ ವಿ.ಪಿ., ಶಂಕರ ದೇವಾಡಿಗ, ಸಂಜೀವ ನಾಯ್ಕ ಜಯಭಾರತಿ, ವಸಂತ ಭಟ್, ಉದಯಕುಮಾರ್ ಶೆಟ್ಟಿ, ಷಣ್ಮುಗಪ್ಪ ಪೂಜಾರಿ, ಚೈತ್ರ ಪ್ರಭಾ, ಶ್ರೀ ಶಾಂ, ಸಬೀನಾ, ಅಕ್ಕಮ್ಮ ಯಕೂಬ್ ಎಸ್ ಸ್ಕ್ಯಾನಿ ಪಿಂಟೋ, ಅವರನ್ನು ಗೌರವಿಸಲಾಯಿತು. ಹಾಗು ಪ್ರಸ್ತುತ ವರ್ಷ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಸಂಯುಕ್ತ ಡಿ.ಪ್ರಭು, ಹರ್ಷಿತಾ ಹಾಗೂ ಸರಿತಾ ಅವರನ್ನು ಗೌರವಿಸಲಾಯಿತು.
ಜಿ.ಪಂ.ಮಾಜಿ ಸದಸ್ಯ ರಾಜಶೇಖರ ಅಜಿ ಅವರು ದತ್ತಿ ನಿಧಿ ಹಸ್ತಾಂತರಿಸಿದರು. ಆರಂಭದಲ್ಲಿ ಗಣ್ಯರಿಂದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.