ಮಂಗಳೂರು: ದೇವರ ಆಶೀರ್ವಾದದಿಂದ ನಾನು ರಾಜಕೀಯ ಜೀವನದಲ್ಲಿ ಇಷ್ಟರ ಮಟ್ಟಿಗೆ ತಲುಪಿದ್ದೇನೆ. ಇದಕ್ಕಿಂತ ದೊಡ್ಡ ಹುದ್ದೆಗೆ ಹೋಗಬೇಕಾದರೆ ದೇವರು ಹಾಗೂ ನನ್ನ ಕ್ಷೇತ್ರದ ಜನರು ಇಚ್ಛಿಸಿದ್ದಲ್ಲಿ ಖಂಡಿತವಾಗಿಯೂ ಅದು ಸಾಧ್ಯವಾಗುತ್ತದೆ ಎಂದು ಸ್ಪೀಕರ್ ಯು.ಟಿ. ಖಾದರ್ ಹೇಳಿದ್ದಾರೆ.
ಅವರು ಶನಿವಾರ ಸರ್ಕ್ಯೂ ಟ್ ಹೌಸ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ನಾನು ನನ್ನ ರಾಜಕೀಯ ಜೀವನದಲ್ಲಿ ಯಾವತ್ತಿಗೂ ಕೂಡ ಯಾವುದೇ ಹುದ್ದೆಗೆ ಆಸೆ ಪಟ್ಟವನಲ್ಲ. ಇಂದಿನ ನನ್ನ ರಾಜಕೀಯ ಹುದ್ದೆಯು ದೇವರ ಆಶೀರ್ವಾದದಿಂದ ಸಿಕ್ಕಿದೆ. ಹೀಗೆ ದೇವರ ಆಶೀರ್ವಾದ, ಜನಗಳ ಆಶೀರ್ವಾದ ಇದ್ದಲ್ಲಿ ಇದಕ್ಕಿಂತ ದೊಡ್ಡ ಸ್ಥಾನ ಲಭಿಸಿ, ಮತ್ತೆ ಸಚಿವನಾಗಲೂಬಹುದು. ನನ್ನ ವಿರೋಧಿಗಳಿಗೂ ನಾನು ಪ್ರಾಮಾಣಿಕ ಸೇವೆ ನೀಡುವೆ. ನನ್ನ ವಿರುದ್ಧದ ಸುಳ್ಳು ಆರೋಪಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ,’ ಎಂದರು.
ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕರಾವಳಿಗೆ ಪ್ರಾಶಸ್ತ್ರ್ಯ ನೀಡಿದ್ದು, ನೇತ್ರಾವತಿ ನದಿಗೆ ಎರಡು ಹೊಸ ಸೇತುವೆ, ಪುತ್ತೂರಿನಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ, ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಕ್ರೂಸ್, ವಾಟರ್ ಮೆಟ್ರೋ, ಮೀನುಗಾರಿಕೆ ಸಂಪರ್ಕ ರಸ್ತೆಗಳ ಅಭಿವೃದ್ಧಿ, ಪಿಲಿಕುಳದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಯುವಕರ ತರಬೇತಿ ಕೇಂದ್ರದ ಅಭಿವೃದ್ಧಿ, ಉಳ್ಳಾಲದಲ್ಲಿ ವಸತಿ ಸಹಿತ ಸರಕಾರಿ ಮಹಿಳಾ ಪಿಯು ವಸತಿ ಕಾಲೇಜಿಗೆ ಅನುಮೋದನೆ ಮತ್ತಿತರ ಯೋಜನೆಗಳನ್ನು ಒದಗಿಸಲಾಗಿದೆ ಎಂದರು.