ಮಂಗಳೂರು: ಸರ್ವಧರ್ಮದ ಜನರು ಮಂಗಳೂರು ಕ್ಷೇತ್ರದಲ್ಲಿ ಸೌಹಾರ್ದದಿಂದ ವಾಸವಾಗಿದ್ದಾರೆ. ಕೆಲವೇ ಕೆಲವು ಯುವಕರಿಂದಾಗಿ ಕ್ಷೇತ್ರಕ್ಕೆ ಕೆಟ್ಟ ಹೆಸರು ಬಂದಿದೆ. ಬೋಳಿಯಾರ್ ನಡೆದ ಘಟನೆಯ ಬಳಿಕ ಸ್ಥಳೀಯರೆ ಮುಂದೆ ನಿಂತು ಅಲ್ಲಿ ಸೌಹಾರ್ದ ನೆಲೆಸುವಂತೆ ಮಾಡಿದ್ದಾರೆ. ಹೊರಗಿನವರು ಅಲ್ಲಿಗೆ ಹೋಗಿ ಶಾಂತಿ ಕೆಡಿಸುವ ಕೆಲಸ ಮಾಡುವುದು ಬೇಡ ಎಂದು ಕ್ಷೇತ್ರದ ಶಾಸಕ, ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಹೇಳಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ರಾಜಕಾರಣ ಮಾಡದೆ ಎಲ್ಲರೂ ನೆಮ್ಮದಿಯಿಂದ ಇರಲು ಅವಕಾಶ ಮಾಡಿಕೊಡಬೇಕು. ಕ್ಷೇತ್ರದ ಶೇ.99ರಷ್ಟು ಒಳ್ಳೆಯವರನ್ನು ನೋಡುವ ಜವಾಬ್ದಾರಿ ನನ್ನದು. ಉಳಿದ ಶೇ.1ರಷ್ಟು ಸಮಸ್ಯೆ ಸೃಷ್ಟಿಸುವವರನ್ನು ಪೊಲೀಸರು ನೋಡಿಕೊಳ್ಳುತ್ತಾರೆ. ಆಸ್ಪತ್ರೆಯಲ್ಲಿದ್ದವರು ಒಳ್ಳೆಯವರಾಗಿದ್ದರೆ ಹೋಗಿ ನೋಡುತ್ತಿದೆ. ಸಮಸ್ಯೆ ಸೃಷ್ಟಿಸುವವರನ್ನು ಹೋಗಿ ಸಂತೈಸುವ ಅಗತ್ಯ ಇಲ್ಲ,’ ಎಂದರು.
ಇನ್ನು ಸಾಮಾಜಿಕ ಜಾಲತಾಣದಲ್ಲಿ ಕ್ಷೇತ್ರದ ಶಾಸಕರು ಕಾಣೆಯಾಗಿದ್ದಾರೆ ಎಂದು ಯಾರೋ ಹರಿಯ ಬಿಟ್ಟಿದ್ದಾರೆ. ಯಾರು ಹಾಕಿದ್ದಾರೆ ಎಂದು ಹೇಳಿದರೆ ನಾನೇ ಅವರಿಗೆ ಐದು ಸಾವಿರ ರೂ. ಕೊಡುತ್ತೇನೆ. ನಾನು ಒಳ್ಳೆಯವರಿಗೆ ಕಾಣುತ್ತೇನೆ. ಸಮಾಜ ವಿರೋಧಿಗಳಿಗೆ ಕಾಣುವುದಿಲ್ಲ ಎಂದು ಖಾದರ್ ಹೇಳಿದರು.