ಬೆಳ್ಮಣ್: ಮುಂಡ್ಕೂರು ಪೇಟೆಯಿಂದ ಕಿನ್ನಿಗೋಳಿ ಸಾಗುವ ದಾರಿಯಲ್ಲಿ ಹೆದ್ದಾರಿಯಲ್ಲೇ ಪಡಿತ್ತಾರು ಬಳಿ ಕಿರು ಸೇತುವೆ ನಿರ್ಮಾಣಗೊಂಡು ಹಲವು ಸಮಯಗಳು ಕಳೆದರೂ ಎರಡೂ ಭಾಗದ ರಸ್ತೆಯನ್ನು ಸಂಪರ್ಕಿಸುವಲ್ಲಿ ಸಮತಟ್ಟು ಮಾಡದ ಹಿನ್ನೆಲೆಯಲ್ಲಿ ಮೋರಿ ನಿರ್ಮಿಸಿದ ಜಾಗದಲ್ಲಿ ಬೃಹತ್ ಹೊಂಡಗಳು ನಿರ್ಮಾಣವಾಗಿ ವಾಹನ ಸವಾರರು ಅಪಾಯ ಎದುರಿಸುತ್ತಿದ್ದಾರೆ.
ಬೆಳ್ಮಣ್ನಿಂದ ಸಂಪರ್ಕವನ್ನು ಪಡೆದು ಕಿನ್ನಿಗೋಳಿ, ಕಟೀಲು, ಮೂಡುಬಿದಿರೆ ಸಹಿತ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸಲು ಹೆಚ್ಚಿನ ವಾಹನ ಸವಾರರು ಇದೇ ರಸ್ತೆಯಲ್ಲಿ ಸಂಚಾರ ನಡೆಸುತ್ತಾರೆ. ಹೊಂಡದಲ್ಲಿ ಕೆಸರು ನೀರು ನಿಂತಿದ್ದು ಕಾರು, ಬಸ್ಸು, ಲಾರಿಯಂತಹ ವಾಹನಗಳು ಓಡಾಡುವ ಸಂದರ್ಭದಲ್ಲಿ ದಾರಿಯಲ್ಲಿ ನಡೆದುಕೊಂಡು ಸಾಗುವ ದಾರಿಹೋಕರು, ಶಾಲಾ ಮಕ್ಕಳ ಸಹಿತ ಬೈಕ್ ಸವಾರರ ಮೇಲೆಯೂ ಕೆಸರು ನೀರು ಎರಚುತ್ತದೆ. ಹಲವು ತಿಂಗಳಿಂದ ನಿತ್ಯ ಈ ಭಾಗದ ಜನ ಸಮಸ್ಯೆಯನ್ನು ಎದುರಿಸುತ್ತಿದ್ದರೂ ಸಂಬಂಧಪಟ್ಟ ಇಲಾಖೆ, ಸ್ಥಳೀಯಾಡಳಿತ ಹಾಗೂ ಗುತ್ತಿಗೆದಾರರು ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಎಂದು ಗ್ರಾಮಸ್ಥರ ಆರೋಪ.
ಕಾಮಗಾರಿ ನಡೆದು ಹಲವು ಸಮಯ ಕಳೆದರೂ ರಸ್ತೆಯ ಹೊಂಡವನ್ನು ಸರಿಪಡಿಸುವಲ್ಲಿ ಗುತ್ತಿಗೆದಾರರು ಮನಸ್ಸು ಮಾಡುತ್ತಿಲ್ಲ. ಹೀಗಾಗಿ ಮೋರಿಯ ನಿರ್ಮಾಣ ಕಾಮಗಾರಿಯೂ ಅವೈಜ್ಞಾನಿಕವಾಗಿ ನಡೆದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.