ಉಡುಪಿ: ನಿಯಮಕ್ಕೆ ವಿರುದ್ಧವಾದ ಹಿಜಾಬ್ ತಪ್ಪಾಗಲಿಲ್ಲ. ನಮ್ಮ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿದ್ದೇ ತಪ್ಪಾಯ್ತಾ? ಕೇಸರಿ ಅಂದರೆ ಕೆಲವರಿಗೆ ಬಹಳ ತುರಿಕೆ. ಹೀಗಂತ ಕಾಂಗ್ರೆಸ್ ಹಾಗೂ ಪ್ರಗತಿಪರರಿಗೆ ಕಲ್ಲಡ್ಕ ಪ್ರಭಾಕರ್ ಭಟ್ ಟಾಂಗ್ ಕೊಟ್ಟಿದ್ದಾರೆ.
ಉಡುಪಿಯಲ್ಲಿ ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಕಲ್ಲಡ್ಕ ಪ್ರಭಾಕರ್ ಭಟ್, ಆಕ್ಷನ್ ಗೆ ರಿಯಾಕ್ಷನ್ ತೋರಿಸದೆ ಹಿಂದೂ ಸಮಾಜ ಸೋತಿದೆ. ಹೊಡೆದರೂ ಬಡಿದರೂ ಹಿಂದೂಗಳು ಸುಮ್ಮನಿರಬೇಕಂತೆ. ಹಿಂದೂಗಳು ಸುಮ್ಮನೆ ಕುಳಿತುಕೊಳ್ಳಬೇಕು ಅಂದ್ರೆ ಅದು ಸಾಧ್ಯವಿಲ್ಲ. ಹಿಂದೂ ಸಮಾಜ ರಿಯಾಕ್ಷನ್ಸ್ ತೋರಿಸುವ ಅಗತ್ಯ ಇದೆ ಎಂದರು.
ಹಾಗೇ ನಾವು ರಿಯಾಕ್ಷನ್ ತೋರಿಸಿದ್ದರಿಂದ ವಿವಾದ ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಯ್ತು. ಹಿಜಾಬ್ ಕೇವಲ ಬಟ್ಟೆ ಹೋರಾಟ ಅಲ್ಲ. ಇನ್ನೊಂದು ದೇಶವಿಭಜನೆಯ ಹುನ್ನಾರ ಇದೆ. ಜಗತ್ತಿನ ಸರ್ವಶ್ರೇಷ್ಠ ಜೀವನಪದ್ಧತಿ ಇರುವುದು ಹಿಂದೂಧರ್ಮದಲ್ಲಿ ಮಾತ್ರ. ಸರ್ವಧರ್ಮ ಸಮ್ಮೇಳನ ಎಂಬ ಶಬ್ದವೇ ಸರಿಯಲ್ಲ. ಮುಸಲ್ಮಾನರು, ಸರ್ವಧರ್ಮ ಸಮ್ಮೇಳನದಲ್ಲಿ ಪಾಲ್ಗೊಳ್ಳೋದು ನಾಚಿಕೆಗೇಡು ಎಂದರು.