ಬೆಂಗಳೂರು : ಬಹುಭಾಷಾ ನಟಿ ಅನುಷ್ಕಾ ಶೆಟ್ಟಿ ಸಹೋದರ, ಜಯ ಕರ್ನಾಟಕ ಸಂಘಟನೆಯ ಗುಣರಂಜನ್ ಶೆಟ್ಟಿ ಹತ್ಯೆಗೆ ಸಂಚು ರೂಪಿಸಲಾಗಿದೆ ಎನ್ನುವ ಆರೋಪ ಕೇಳಿ ಬಂದಿದ್ದು, ಜಯ ಕರ್ನಾಟಕ ಸಂಘಟನೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವ್ರಿಗೆ ದೂರು ಸಲ್ಲಿಸಿದೆ.
ಈ ಮೂಲಕ ದಿವಂಗತ ಮುತ್ತಪ್ಪ ರೈ ಆಪ್ತ ಬಳಗದಲ್ಲಿ ಮತ್ತೆ ಜಿದ್ದು ಶುರುವಾಗಿದ್ಯಾ ಅನ್ನೋ ಅನುಮಾನ ಶುರುವಾಗಿದ್ದು, ಗುಣರಂಜನ್ ಶೆಟ್ಟಿ ಹತ್ಯೆಗೆ ಆಪ್ತರಲ್ಲೇ ಸಂಚು ರೂಪಿಸಿದ್ದಾರಾ ಎಂಬ ಬಗ್ಗೆ ಚರ್ಚೆ ಶುರುವಾಗಿದೆ.
ಜಯ ಕರ್ನಾಟಕ ಸಂಘಟನೆಯ ಗುಣರಂಜನ್ ಶೆಟ್ಟಿ ಹತ್ಯೆಗೆ ಸಂಚು ರೂಪಿದವರಲ್ಲಿ ಮನ್ಮಿತ್ ರೈ ಹೆಸರು ಕೇಳಿ ಬಂದಿದೆ. ಆದ್ರೆ, ಮನ್ಮಿತ್ ರೈ ಮಾತ್ರ ‘ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಇದು ಎಷ್ಟು ಸತ್ಯ ಎಂಬುವುದನ್ನ ಪೊಲೀಸರು ತನಿಖೆ ಮಾಡುತ್ತಾರೆ. ಆದ್ರೆ ಈ ವಿಚಾರದಲ್ಲಿ ನನ್ನ ಹೆಸರು ಏಕೆ ಬರುತ್ತಿದೆಯೋ ಗೊತ್ತಿಲ್ಲ. ನಾನು ವ್ಯವಹಾರದ ಕಾರಣ ವಿದೇಶಕ್ಕೆ ಬಂದಿದ್ದೇನೆ’ ಎಂದಿದ್ದಾರೆ.
ಅಂದ್ಹಾಗೆ, ದಿವಂಗತ ಮುತ್ತಪ್ಪ ರೈ ಅವ್ರ ಆಪ್ತರ ಒಬ್ಬರಾದ ಗುಣರಂಜನ್ ಶೆಟ್ಟಿ, ಜಯ ಕರ್ನಾಟಕ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದಾರೆ. ಈ ಹಿಂದೆಯೂ ಆಪ್ತರ ಗಲಾಟೆ ಸದ್ದು ಮಾಡಿದ್ದು, ಗುಣರಂಜನ್ ಮತ್ತು ಮನ್ಮಿತ್ ಇಬ್ಬರೂ ಮುತ್ತಪ್ಪ ರೈ ಜತೆ ಇದ್ದವರು. ಇದೀಗ ಇವರೇ ಮಧ್ಯೆಯೇ ಭಿನ್ನಾಭಿಪ್ರಾಯ ಮೂಡಿದ್ಯಾ ಎಂಬ ಬಗ್ಗೆ ಚರ್ಚೆಗಳಾಗುತ್ತಿವೆ.