ಬೆಂಗಳೂರು: ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಗೃಹಲಕ್ಷ್ಮೀ ಯೋಜನೆಯ ಅರ್ಜಿ ನಮೂನೆಯನ್ನು ಬಿಡುಗಡೆ ಮಾಡಿದೆ.
ಈ ಅರ್ಜಿಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪೋಟೋವಿದೆ.
ಬಿಡುಗಡೆಯಾಗಿರುವ‘ಗೃಹಲಕ್ಷ್ಮೀ’ಅರ್ಜಿ ನಮೂನೆಯಲ್ಲಿ ಪತಿಯ ದಾಖಲೆ ಕೇಳಲಾಗಿದೆ.ಆದರೆ ಪತಿ ಇಲ್ಲದವರು/ ಮೃತಪಟ್ಟವರು ಹೇಗೆ ಅದನ್ನು ತುಂಬಬೇಕು ಎನ್ನುವುದು ಅಸ್ಪಷ್ಟವಾಗಿದೆ. ಅರ್ಜಿಯಲ್ಲಿ ಮನೆಯ ಯಜಮಾನಿಯ ವೋಟರ್ ಐಡಿ, ರೇಷನ್ ಕಾರ್ಡ್, ಆಧಾರ್ ಕಾರ್ಡ್ ದಾಖಲೆ ಕೇಳಲಾಗಿದೆ. ಪತಿಯ ದಾಖಲೆಗಳನ್ನು ಕೂಡ ಇದೇ ರೀತಿ ಕೇಳಲಾಗಿದೆ.
ಗೃಹಲಕ್ಷ್ಮೀ ಯೋಜನೆಗೆ ಜೂನ್ 15 ರಿಂದ ಜುಲೈ 15 ತನಕ ಅರ್ಜಿ ಸಲ್ಲಿಸಲು ಅವಕಾಶವಿದೆ.ಅಲ್ಲದೇ ನಾನು ಮತ್ತು ನನ್ನ ಪತಿ ಜಿಎಸ್ಟಿ ಪಾವತಿದಾರರು ಅಲ್ಲ ಎಂದು ಘೋಷಣೆ ಸಹ ಮಾಡಬೇಕಾಗಿದೆ.ಅರ್ಜಿದಾದರರೇ ಯಜಮಾನಿ ಯಾರು ಎಂದು ಘೋಷಣೆ ಮಾಡಿ ಸಲ್ಲಿಸಬೇಕಾಗಿದೆ. ಜುಲೈ 15 ರಿಂದ ಫಲಾನುಭವಿಗಳ ಆಯ್ಕೆ ನಡೆಯಲಿದೆ. ಆಯ್ಕೆಗೊಂಡ ಫಲಾನುಭವಿಗಳಿಗೆ ಆಗಸ್ಟ್ 15 ರಂದು ಅವರ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ.
ಅರ್ಜಿದಾರರು ಸೇವಾ ಸಿಂಧು ಪೋರ್ಟಲ್ ಮೂಲಕವಾಗಲಿ ಅಥವಾ ಭೌತಿಕವಾಗಿಯಾಗಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.ಆಯ್ಕೆಯಾದ ಮನೆ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು 2000 ಹಣ ಜಮೆಯಾಗಲಿದೆ.