ಮಂಗಳೂರು: ಇಲ್ಲಿನ ಉಳ್ಳಾಲ ಕ್ಷೇತ್ರದ ಫಜೀರ್ನಲ್ಲಿ ಅಗ್ನಿಶಾಮಕ ಠಾಣೆ ಆರಂಭಿಸಲು ₹9 ಕೋಟಿ ಅನುದಾನ ಮಂಜೂರಾಗಿದೆ. ಅಷ್ಟೇ ಅಲ್ಲದೇ ನನ್ನ ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ₹100 ಕೋಟಿ ಅನುದಾನ ಮಂಜೂರಾಗಿದೆ ಎಂದು ಶಾಸಕ, ವಿಧಾನಸಭೆಯ ಅಧ್ಯಕ್ಷ ಯು.ಟಿ. ಖಾದರ್ ತಿಳಿಸಿದರು.
ಅವರು ಗುರುವಾರದಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಈಗಾಗಲೇ ನನ್ನ ಕ್ಷೇತ್ರಗಳ ರಸ್ತೆ ಅಭಿವೃದ್ಧಿಗೆ ₹100 ಕೋಟಿ ಅನುದಾನ ಮಂಜೂರಾಗಿದ್ದು, ತೊಕ್ಕೊಟ್ಟು ಜಂಕ್ಷನ್ನಲ್ಲಿ 6 ಪಥ ನಿರ್ಮಾಣವಾಗಲಿದೆ. ಇನ್ನು ಉಳ್ಳಾಲ ಕ್ಷೇತ್ರದ ಫಜೀರ್ನ ಎರಡು ಎಕರೆ ಜಾಗದಲ್ಲಿ ಅಗ್ನಿಶಾಮಕ ಠಾಣೆ ತಲೆ ಎತ್ತಲಿದೆ. ಕಟ್ಟಡ ನಿರ್ಮಾಣ, ವಾಹನಗಳ ಖರೀದಿ, ಹೊಸ ಹುದ್ದೆಗಳ ಸೃಜನೆಗೆ ಮಂಜೂರಾತಿ ಸಿಕ್ಕಿದೆ. ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮ ಕಟ್ಟಡ ನಿರ್ಮಿಸಲಿದೆ,’ ಎಂದು ತಿಳಿಸಿದರು.
ಈಗ ತೊಕ್ಕೊಟ್ಟುವಿನಲ್ಲಿರುವ 32 ಕೆ.ವಿ ವಿದ್ಯುತ್ ಉಪ ಕೇಂದ್ರವನ್ನು 132 ಕೆ.ವಿ.ಗೆ ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ. ಅಷ್ಟೇಅಲ್ಲದೆ ಉಳ್ಳಾಲ ನಗರದಲ್ಲಿ ಭೂಗತ ವಿದ್ಯುತ್ ಕೇಬಲ್ ಅಳವಡಿಕೆಯ ಕೆಲಸ ನಡೆಯಲಿದ್ದು, ಈ ಯೋಜನೆಗೆ ₹200 ಕೋಟಿ ಮೊತ್ತದ ಅನುಮೋದನೆ ಸಿಕ್ಕಿದೆ. ಉಳ್ಳಾಲ ಭಾಗದ ವಿದ್ಯುತ್ ಸಮಸ್ಯೆಗೆ ಶಾಶ್ವತವಾಗಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಂಗಳೂರಿನಿಂದ ಉಳ್ಳಾಲಕ್ಕೆ ನೇರವಾಗಿ ಭೂಗತ ವಿದ್ಯುತ್ ಕೇಬಲ್ ಅಳವಡಿಸಲಾಗುವುದು. ಇದಕ್ಕಾಗಿ ನೇತ್ರಾವತಿ ಸೇತುವೆಯಲ್ಲಿ ಈ ಕೇಬಲ್ ಅಳವಡಿಕೆಗೆ ಅನುಮತಿ ಸಿಗಬೇಕಿದೆ. ಇದು ಅನುಷ್ಠಾನಗೊಂಡರೆ ವಿದ್ಯುತ್ ಸಮಸ್ಯೆ ಪರಿಹಾರವಾಗುತ್ತದೆ,’ ಎಂದರು.