ವಿಟ್ಲ: ಮಹಿಳೆಗೆ ಗುಪ್ತಾಂಗ ತೋರಿಸಿ ವಿಕೃತಿ ಮೆರೆದಿದ್ದ ಗ್ರಾ.ಪಂ.ಉಪಾಧ್ಯಕ್ಷರನ್ನು ಬಿಜೆಪಿ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ
ರಸ್ತೆ ವಿವಾದ ಸಂಬಂಧ ಮಹಿಳೆ ನಡೆದುಕೊಂಡು ಮನೆಗೆ ತೆರಳುತ್ತಿದ್ದ ವೇಳೆ ಇಡ್ಕಿದು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪದ್ಮನಾಭ ಸಫಲ್ಯ ತನ್ನ ಗುಪ್ತಾಂಗ ತೋರಿಸಿದ್ದಾನೆ. ಮನೆ ದಾರಿಗೆ ಗೇಟು ಅಳವಡಿಸಿರುವುದನ್ನು ಪ್ರಶ್ನಿಸಿದ್ದಕ್ಕೆ ಮಹಿಳೆಗೆ ಗುಪ್ತಾಂಗ ತೋರಿಸಿದ್ದು, ಈ ಸಂಬಂಧ ಮಹಿಳೆ ಪದ್ಮನಾಭ ಸಪಲ್ಯ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೆಯೇ ಪದ್ಮನಾಭ ಸಪಲ್ಯರನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಲಾಗಿದೆ.

ತಮ್ಮ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಲೆ ತನ್ನ ಮನೆಗೆ ಬರುದ ದಾರಿಯಲ್ಲಿ ಯಾರೋ ಕೆಲಸ ಮಾಡುವ ಶಬ್ಧ ಕೇಳಿ ಬಂದಿದೆ. ಹೀಗಾಗಿ ಸ್ಥಳಕ್ಕೆ ತೆರಳಿ ವಿಡಿಯೋ ಮಾಡಿದ್ದು, ಇದನ್ನು ನೋಡಿದ ಪದ್ಮನಾಭ ತನ್ನ ಚಡ್ಡಿಯನ್ನು ಕೆಳಗೆ ಜಾರಿಸಿ ಗುಪ್ತಾಂಗ ತೋರಿಸಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ ಬಿಎನ್ಎಸ್ 2023ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ದೂರು ದಾಖಲಾಗುತ್ತಿದ್ದಂತೆಯೇ ಪದ್ಮನಾಭ ಸಪಲ್ಯ ಅವರ ಭಾರತೀಯ ಜನತಾ ಪಾರ್ಟಿಯ ಪ್ರಾಥಮಿಕ ಸದಸ್ಯತ್ವವನ್ನು ರದ್ದುಗೊಳಿಸಿ, ಪಕ್ಷದಿಂದ ಉಚ್ಚಾಟಿಸಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜರೆಮಾರು ಆದೇಶಿಸಿದ್ದಾರೆ. ಮಹಿಳೆಯರಿಗೆ ಗೌರವ ಮತ್ತು ಪ್ರಾತಿನಿದ್ಯ ಕೊಡುವ ಪಕ್ಷದಲ್ಲಿ ವ್ಯತಿರಿಕ್ತವಾಗಿ ನಡೆದುಕೊಂಡು ಪಕ್ಷದ ಘನತೆಗೆ ಗೌರವ ಹಾಗೂ ವರ್ಚಸ್ಸಿಗೆ ಘಾಸಿಯುಂಟು ಮಾಡಿರುವ ಕಾರಣಕ್ಕಾಗಿ ಈ ಕ್ರಮ ಜರುಗಿಸಲಾಗಿದೆ. ಪಂಚಾಯತ್ ಉಪಾಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ನೀಡುವಂತೆ ಆದೇಶದಲ್ಲಿ ಸೂಚಿಸಿದ್ದಾರೆ.