ಬೆಂಗಳೂರು: ನಿನ್ನೆಯಷ್ಟೇ ರಾಜ್ಯದಲ್ಲಿ ಪಟಾಕಿಯನ್ನು ನಿಷೇಧಿಸಲಾಗಿದೆ ಅಂತಾ ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ. ಅಲ್ಲದೇ ಇನ್ನೆರಡು ದಿನಗಳಲ್ಲಿ ಈ ಬಗ್ಗೆ ಸರ್ಕಾರ ಆದೇಶ ಕೂಡ ಹೊರಡಿಸಲಿದೆ. ಹೀಗಿರುವಾಗಲೇ ಈ ಬಾರಿಯ ದೀಪಾಳಿ ಹಬ್ಬದಲ್ಲಿ ಹಸಿರು ಪಟಾಕಿ ಹಚ್ಚಲು ಮಾತ್ರ ಅವಕಾಶ ನೀಡಿದೆ.
ಹೌದು…ಈ ವಿಚಾರವಾಗಿ ಮಾಧ್ಯಮ ಪ್ರಕಟನೆ ಹೊರಡಿಸಿರುವ ರಾಜ್ಯ ಸರ್ಕಾರ ಹೆಚ್ಚು ಶಬ್ದವಲ್ಲದ, ಮಾಲಿನ್ಯವಲ್ಲದ ಪಟಾಕಿಗಳನ್ನು ಸಿಡಿಸಲು ಅವಕಾಶ ನೀಡಿದೆ. ಆದರೆ ಯಾವುದೇ ಬಗೆಯ ಪಟಾಕಿಗಳನ್ನು ಮಾರಾಟ ಮಾಡುವುದಾಗಲಿ ಅಥವಾ ಹೊಡೆಯುವುದಾಗಲಿ ಮಾಡುವಂತಿಲ್ಲ. ಈ ಬಗ್ಗೆ ಒಂದೆರಡು ದಿನಗಳಲ್ಲಿ ಆದೇಶ ಹೊರಬೀಳಲಿದ್ದು, ಜಿಲ್ಲಾಡಳಿತಗಳಿಗೆ ಸುತ್ತೋಲೆ ರವಾನೆ ಆಗಲಿದೆ.
ಕೊರೊನಾ ಸೋಂಕಿತರು ಅದರಲ್ಲೂ ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವವರ ಆರೋಗ್ಯದ ಮೇಲೆ ಪಟಾಕಿ ಶಬ್ಧ ಮತ್ತು ವಿಷಕಾರಿ ಹೊಗೆ ತೀವ್ರ ಪರಿಣಾಮ ಬೀರಲಿದೆ. ಇದ್ರಿಂದ ಕೊರೊನಾ ಸಾವು-ನೋವು ಹೆಚ್ಚಳ ಆಗಬಹುದು. ಪಟಾಕಿ ಬ್ಯಾನ್ ಮಾಡೋದು ಒಳಿತು. ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬ ತಜ್ಞರ ಸಲಹೆ ಪೂರ್ವಕ ಎಚ್ಚರಿಕೆಗೆ ಮನ್ನಣೆ ನೀಡಿ ರಾಜ್ಯ ಸರ್ಕಾರ ಈ ಕ್ರಮ ಕೈಗೊಂಡಿದೆ. ದೀಪಾವಳಿ ಬೆಳಕಿನ ಹಬ್ಬ ಹೀಗಾಗಿ ದೀಪ ಬೆಳಗಿ, ಪಟಾಕಿ ಬೇಡ. ಬೇಕಿದ್ದರೆ ಮಾಲಿನ್ಯಕಾರಕವಲ್ಲದ ಹಸಿರು ಪಟಾಕಿ ಹಚ್ಚಿ ಎಂಬ ಸಂದೇಶವನ್ನು ಸಿಎಂ ಯಡಿಯೂರಪ್ಪ ರವಾನಿಸಿದ್ದಾರೆ.