ಪುತ್ತೂರು: ಖಾತೆಗೆ ಬೋನಸ್ ಬಂದಿದೆ ಎಂಬ ಸಂದೇಶಕ್ಕೆ ಸಂಬಂಧಿಸಿ ಹಣವನ್ನು ಪಡೆಯಲು ಒಟಿಪಿ ನೀಡಿದ ವ್ಯಕ್ತಿಯೋರ್ವರು ತನ್ನ ಖಾತೆಯಿಂದ ಲಕ್ಷಾಂತರ ರೂ. ಕಳೆದುಕೊಂಡ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಮ್ಮಿಂಜೆ ಗ್ರಾಮದ ಪ್ರಗತಿ ಲೇ ಔಟ್ ನಿವಾಸಿ ಶ್ರೀನಿವಾಸ ಗೌಡ ಮೋಸ ಹೋದವರು.
*ಪ್ರಕರಣದ ವಿವರ*: ಶ್ರೀನಿವಾಸ ಗೌಡ ಅವರ ದೂರವಾಣಿಗೆ ಮೇ 26ರಂದು ಸಂಜೆ ಆಕ್ಸಿಸ್ ಬ್ಯಾಂಕ್ ಎಂಬ ಹೆಸರಿನಲ್ಲಿ ಬಂದಿರುವ ಸಂದೇಶವನ್ನು ತೆರೆದಾಗ ಆಕ್ಸಿಸ್ ಬ್ಯಾಂಕ್ ಹೋಲುವ ಪೇಜ್ ತೆರೆದಿತ್ತು. ಅದರಲ್ಲಿ ನಿಮ್ಮ ಖಾತೆಗೆ 13,879 ರೂ. ಬೋನಸ್ ಬಂದಿರುವುದಾಗಿ ಸಂದೇಶವಿತ್ತಲ್ಲದೆ, ಈ ಬೋನಸ್ ಪಡೆಯಲು ವೆಬ್ಸೈಟ್ನಲ್ಲಿ ಕೇಳಿರುವಂತೆ ತನ್ನ ಬ್ಯಾಂಕ್ ಖಾತೆ ಸಂಖ್ಯೆ ಸಹಿತ ಎಲ್ಲ ಮಾಹಿತಿಯೊಂದಿಗೆ ಒಟಿಪಿ ಸಂಖ್ಯೆಯನ್ನೂ ನೀಡಿದರು. ಸ್ವಲ್ಪ ಸಮಯದ ಬಳಿಕ ಅವರ ಬ್ಯಾಂಕ್ ಖಾತೆಯಿಂದ 90,850 ರೂ. ಮತ್ತು 24,500 ರೂ. ಸೇರಿ ಒಟ್ಟು 1,15,358 ರೂ. ಕಡಿತಗೊಂಡ ಸಂದೇಶ ಬಂತು. ಅನುಮಾನಗೊಂಡು ತತ್ಕ್ಷಣ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದಾಗ ಅವರ ಖಾತೆಯಿಂದ ಅಪರಿಚಿತ ಖಾತೆಗೆ ಹಣ ವರ್ಗಾವಣೆಗೊಂಡು ತಾನು ಮೋಸ ಹೋದ ವಿಚಾರ ತಿಳಿಯಿತು.