ಉಡುಪಿ; ಮಾರಾಟಕ್ಕೆ ತಂದಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಸ್ನೇಹಿತನೇ ಕದ್ದ ಘಟನೆ ಉಡುಪಿಯಲ್ಲಿ ತಡವಾಗಿ ಬಂದಿದೆ.
ರಾಜಸ್ಥಾನ ಮೂಲದ ಸದ್ಯ ಮಂಗಳೂರು ಅತ್ತಾವರ ಕಾಪ್ರಿಗುಡ್ಡೆ ನಿವಾಸಿ ರಮೇಶ್ ಕುಮಾರ್(26) ಎಂಬವರು ಮುಹಮ್ಮದ್ ಶಹಾಬುದ್ದಿನ್ ಮಾಲೀಕತ್ವದ ಹಾಜಿ ಗೋಲ್ಡ್ ಆಯಂಡ್ ಡೈಮೆಂಡ್ ಎಂಬ ಜ್ಯುವೆಲ್ಲರಿ ಹೋಲ್ ಸೇಲ್ಸ್ ಮಾರಾಟ ಅಂಗಡಿಯ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡಿಕೊಂಡಿದ್ದರು.
ರಮೇಶ್ ಕುಮಾರ್ ಜೂ.10ರಂದು 421.380 ಮಿಲಿ ಗ್ರಾಂ ತೂಕದ ಚಿನ್ನಾಭರಣಗಳನ್ನು ಹಾಜಿ ಗೋಲ್ಡ್ ಎಂಡ್ ಡೈಮೆಂಡ್ ಅಂಗಡಿಯಿಂದ ಮಾರಾಟ ಮಾಡಲು ಹೊರಟಿದ್ದು, ಇವರಿಗೆ ಮಧ್ಯಾಹ್ನ ಅವರ ಸ್ನೇಹಿತ ರಾಜಸ್ಥಾನದ ಪಾಲಿ ಜಿಲ್ಲೆಯ ರಾಮ್ ಎಂಬವರು ಮಂಗಳೂರಿನ ಪಂಪ್ವೇಲ್ ಬಳಿ ಸಿಕ್ಕಿದ್ದರು.ಇವರಿಬ್ಬರು ಬಸ್ ನಲ್ಲಿ ಹೊರಟು ಸಂಜೆ ಉಪ್ಪುಂದದ ಅಶೋಕ್ ಜ್ಯುವೆಲ್ಲರಿಗೆ ಹೋಗಿ 14 ಗ್ರಾಂ ಚಿನ್ನಾಭರಣ ಮಾರಾಟ ಮಾಡಿ ಅಲ್ಲಿಂದ 14 ಗಾಂ ಚಿನ್ನದ ಗಟ್ಟಿಯನ್ನು ತೆಗೆದುಕೊಂಡು ವಾಪಸು ಮಂಗಳೂರಿಗೆ ಹೊರಟಿದ್ದರು. ಇವರು ಕುಂದಾಪುರ ತಲುಪುವಾಗ ಸಂಜೆ 7 ಆದ್ದರಿಂದ ಇವರಿಬ್ಬರು ಕುಂದಾಪುರದ ಹರಿಪ್ರಸಾದ ಹೊಟೇಲ್ ನಲ್ಲಿ ರೂಮ್ ಮಾಡಿ ಉಳಿದುಕೊಂಡರು.
ರಾತ್ರಿ 10:30ರ ಸುಮಾರಿಗೆ ರಮೇಶ್ ಕುಮಾರ್ ಮಲಗುವ ಮಂಚದ ನಡುವೆ ಚಿನ್ನಾಭರಣ ಇರುವ ಬ್ಯಾಗ್ ಇಟ್ಟು ಮಲಗಿದ್ದು, ಜೂ.11ರಂದು ಬೆಳಗ್ಗಿನ ಜಾವ 3 ಗಂಟೆಗೆ ನೀರು ಕುಡಿಯಲು ಎದ್ದಾಗ ಜೊತೆಗಿದ್ದ ರಾಮ್ ರೂಮ್ ನಲ್ಲಿ ಇರಲಿಲ್ಲ. ಅಲ್ಲದೆ ಜೊತೆಯಲ್ಲಿದ್ದ ಚಿನ್ನಾಭರಣ ಇದ್ದ ಬ್ಯಾಗ್ ಕೂಡ ಕಳವಾಗಿರುವುದು ಗೊತ್ತಾಗಿದೆ. ನಂತರ ರೂಮಿನ ಬಾಗಿಲನ್ನು ತೆರೆಯಲು ಹೋದಾಗ ಹೊರಗಿನಿಂದ ಚಿಲಕ ಹಾಕಿತ್ತು ಎನ್ನಲಾಗಿದೆ.
ಇನ್ನು ಕಳವಾದ ಚಿನ್ನಾಭರಣಗಳ ಒಟ್ಟು ಮೌಲ್ಯ 22,56,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.