ಬಂಟ್ವಾಳ: ಮಾತೃಭೂಮಿ ಯುವ ವೇದಿಕೆ (ರಿ.) ಮಾಣಿಲ ಸಂಘದ ವತಿಯಿಂದ ವನಮಹೋತ್ಸವ ಕಾರ್ಯಕ್ರಮದ ಜೊತೆಗೆ ಪರಿಸರ ಜಾಗೃತಿ ಹಾಗೂ ಸ್ವಚ್ಛತಾ ಅಭಿಯಾನವು ಸರಕಾರಿ ಪ್ರೌಢ ಶಾಲೆ ಮಾಣಿಲದಲ್ಲಿ ಯಶಸ್ವಿಯಾಗಿ ನಡೆಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಗಿಡಗಳ ವಿತರಣೆ ಮತ್ತು ನೆಡುವಿಕೆ ಗಣ್ಯರ ಸಮ್ಮುಖದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಪರಿಸರದ ಜೀವಿಗಳ ಬದುಕಿನ ಬಗ್ಗೆ ಅದರಲ್ಲೂ ಮುಖ್ಯವಾಗಿ ಉರಗಗಳ (ಹಾವುಗಳ) ಗುಣಲಕ್ಷಣಗಳ ಕುರಿತು ವಿಶೇಷವಾಗಿ ಮಾಹಿತಿಯನ್ನು ಖ್ಯಾತ ಉರಗ ತಜ್ಞ ಸ್ನೇಕ್ ಕಿರಣ್ ಮಂಗಳೂರು (ಕ್ಸಾವಿಯೆರ್ ಕಿರಣ್ ಪಿಂಟೋ) ಇವರು ನೀಡಿದರು. ಇವರು ಸರಕಾರಿ ಪ್ರೌಢ ಶಾಲೆ ಮಾಣಿಲದಲ್ಲಿ ಮಾತೃಭೂಮಿ ಯುವ ವೇದಿಕೆ (ರಿ.) ಮಾಣಿಲ ಇವರು ಆಯೋಜಿಸಿರುವ ವನಮಹೋತ್ಸವ ಹಾಗೂ ಪರಿಸರ ಜಾಗೃತಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾಹಿತಿ ನೀಡಿದರು.
ವಿಷಕಾರಿ ಹಾವುಗಳ ಕುರಿತ ಮಾಹಿತಿ, ಅವುಗಳ ಗುರುತಿಸುವಿಕೆ, ಜೊತೆಗೆ ಪ್ರಥಮ ಚಿಕಿತ್ಸೆ, ಹಾವುಗಳ ಬಗ್ಗೆ ನಿಲ್ಲಿಸಬೇಕಾದ ಮೂಢನಂಬಿಕೆಗಳು, ಹಾವು ಕಚ್ಚಿದಾಗ ಮಾಡಬೇಕಾದ ಮತ್ತು ಮಾಡಬಾರದ ಅಂಶಗಳ ಕುರಿತು ಸಮಗ್ರ ಮಾಹಿತಿಯನ್ನು ನೀಡುವ ಜೊತೆಗೆ ಪರಿಸರದಲ್ಲಿ ಆಗುವ ಮಲಿನವನ್ನು ತಡೆಯುವುದರ ಮೂಲಕ ಮತ್ತು ಅರಣ್ಯವನ್ನು ಸಂರಕ್ಷಿಸುವ ಮೂಲಕ ವನ್ಯ ಜೀವಿಗಳಿಗೂ ಆಸರೆಯಾಗಬೇಕು ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಸಾಮಾಜಿಕ ಹಿರಿಯ ಕಾರ್ಯಕರ್ತರು ಹಾಗೂ ದಾನಿಗಳು ಆಗಿರುವ ಮುರುವ ನಡುಮನೆ ಶ್ರೀ ಮಹಾಬಲ ಭಟ್ ರವರು ಮಾತನಾಡಿ ವನಮಹೋತ್ಸವದಂತಹ ಕಾರ್ಯಕ್ರಮಗಳು ಇನ್ನಷ್ಟು ಸಮಾಜದಲ್ಲಿ ಆಗಬೇಕು ಹಾಗೂ ಇಂತಹ ಕಾರ್ಯಕ್ರಮದಿಂದ ಪರಿಸರ ಸಂರಕ್ಷಿಸಲು ಸಾಧ್ಯ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಸರಕಾರಿ ಪ್ರೌಢ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಲತಾ ಮೇಡಂ ಮಾತನಾಡಿ ಪರಿಸರವನ್ನು ಸ್ವಚ್ಛವಾಗಿಡುವುದು ನಮ್ಮೆಲ್ಲರ ಕರ್ತವ್ಯ, ನಮ್ಮ ಹಿರಿಯರು ಉಳಿಸಿ ಬೆಳೆಸಿ ಕೊಟ್ಟಂತಹ ಸ್ವಚ್ಛ ಪರಿಸರವನ್ನು ಸಂರಕ್ಷಿಸುತ್ತ ಅದನ್ನು ಮುಂದಿನ ಪೀಳಿಗೆಯವರಿಗೆ ಉಳಿಸಿಕೊಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾತೃಭೂಮಿ ಯುವ ವೇದಿಕೆಯ ಸಹ ಸಂಘಟನಾ ಕಾರ್ಯದರ್ಶಿ ಪ್ರದೀಪ್ ಕೊಂಕೋಡು ಅವರು ವಹಿಸಿ ಸಂಘದ ಕಾರ್ಯ ಚಟುವಟಿಕೆ ಹಾಗೂ ಪರಿಸರ ಜಾಗೃತಿ ಕಾರ್ಯದಲ್ಲಿಎಲ್ಲರೂ ಸಂಘದ ಜೊತೆ ಕೈ ಜೋಡಿಸಬೇಕು ಎಂದು ಪ್ರಾಸ್ತಾವಿಕ ಮಾತುಗಳನ್ನು ಹೇಳಿದರು.
ಸಂಘದ ಸದಸ್ಯರಾದ ಮಿಥುನ್ ಕುಮಾರ್ ಮಾಣಿಲ ಇವರು ಸ್ವಾಗತಿಸಿ, ಸಂಘದ ಸದಸ್ಯೆ ಶ್ರೀಮತಿ ಭವ್ಯಶ್ರೀ ವಂದಿಸಿದರು. ಕು| ಹಿತಾಶ್ರೀ, ಕು| ಶ್ರೇಯಾ ಚೌಟ ಮತ್ತು ಕು| ಜನ್ವಿತಾ ಪ್ರಾರ್ಥಿಸಿದರು. ಸಂಘದ ಸದಸ್ಯೆ ಶ್ರೀಮತಿ ನಳಿನಾಕ್ಷಿ ಇವರು ಕಾರ್ಯಕ್ರಮ ನಿರೂಪಿಸಿದರು.