ನೆಲ್ಯಾಡಿ: ಸರಕಾರಿ ಕಚೇರಿಗಳಲ್ಲಿ ಪರಿಸರ ಪ್ರೇಮಿ, ಸಾಮಾಜಿಕ ಕಾರ್ಯಕರ್ತ ಎಂದು ಬಿಂಬಿಸಿಕೊಂಡು ಪೋಸ್ ಕೊಡುತ್ತಿದ್ದ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಪರಕ್ಕಳ ಒಟ್ಟತೆಂಗಿಲ್ ಮನೆಯ ಸಿಬಿ ಅಲಿಯಾಸ್ ವರ್ಗೀಸ್ ತೋಮಸ್ನ ಅಸಲಿ ಪರಿಸರ ಪ್ರೇಮವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಸಾಕ್ಷಿ ಸಮೇತ ಪತ್ತೆಹಚ್ಚಿದ್ದಾರೆ.
ಪಂಜ ವಲಯ ಅರಣ್ಯ ವ್ಯಾಪ್ತಿಯ ನೂಜಿಬಾಳ್ತಿಲ ಗ್ರಾಮದ ಪರಕ್ಕಳ ಒಟ್ಟತೆಂಗಿಲ್ ಎಂಬಲ್ಲಿ ಖಚಿತ ಮಾಹಿತಿಯ ಮೇರೆಗೆ ಏ.20 ರಂದು ಭಾನುವಾರ ಸಂಜೆ ಪಂಜ ವಲಯ ಅರಣ್ಯಾಧಿಕಾರಿ ಸಂಧ್ಯಾ ಅವರ ಮಾರ್ಗದರ್ಶನದಲ್ಲಿ ಅಧಿಕಾರಿಗಳ ತಂಡ ದಾಳಿ ನಡೆಸಿ ಮನೆಯ ಫ್ರಿಡ್ಜ್ ನಲ್ಲಿ ಅಕ್ರಮವಾಗಿ ಇಟ್ಟಿದ್ದ ಕಾಡು ಕೋಣದ ಕೆಜಿಗಟ್ಟಲೇ ಮಾಂಸ ಮತ್ತು ಪದಾರ್ಥ ಪತ್ತೆ ಹಚ್ಚಿದ ಘಟನೆ ನಡೆದಿದೆ.

ದಾಳಿಯ ವೇಳೆ ಅರಣ್ಯ ಅಧಿಕಾರಿಗಳು ಬರುವುದನ್ನು ಮನೆಯ ಕಿಟಕಿಯಿಂದಲೇ ಗಮನಿಸಿದ ಸಿಬಿ, ಮನೆಯ ಹಿಂದಿನ ಬಾಗಿಲಿನಿಂದ ಓಡಿ ತಪ್ಪಿಸಿಕೊಂಡಿದ್ದಾನೆ. ದಾಳಿಯ ವೇಳೆ ಇತನ ಮನೆಯ ಫ್ರಿಡ್ಜ್ ಮತ್ತು ಅಡುಗೆ ಕೋಣೆಯಲ್ಲಿ ಇರಿಸಲಾಗಿದ್ದ ಸುಮಾರು 10 ಕೆಜಿಗಿಂತಲೂ ಹೆಚ್ಚಿನ ಕಾಡು ಕೋಣದ ಮಾಂಸ, ಒಂದು ಬಂದೂಕು ಮತ್ತು ಮಾಂಸ ಸಾಗಾಟಕ್ಕೆ ಬಳಸಿದ ಈತನ ಫೋರ್ಡ್ ಇಕೊಸ್ಪೋರ್ಟ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಪಂಜ ಉಪವಲಯ ಅರಣ್ಯಾಧಿಕಾರಿ ಅಜಿತ್, ಸುನಿಲ್, ಯಶೋಧರ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.
ಈತನ ಅಕ್ರಮಗಳ ಕುರಿತು ಮೊದಲೇ ಮಾಹಿತಿ ನೀಡಿದ್ದ ವೈರಲ್ ಪತ್ರ..!
ಕಾಡುಪ್ರಾಣಿಗಳ ಬೇಟೆ ಹಾಗೂ ಅವುಗಳ ಮಾಂಸ ಮಾರಾಟ ಮತ್ತು ಈತನ ಮನೆಯ ಮುಂದೆ ಇರುವ ಸುರಕ್ಷಿತ ಅರಣ್ಯದಿಂದ ಮರಗಳನ್ನು ಕಡಿದು ಕಳ್ಳ ಸಾಗಣೆಯು ಸಿಬಿಯ ವೃತ್ತಿಯಾಗಿತ್ತು. ಇದರಿಂದ ಬರುವ ಹಣದಿಂದ ಐಷಾರಾಮಿ ಜೀವನ ನಡೆಸುತ್ತಿದ್ದ ಬಗ್ಗೆ ಕಳೆದ ಕೆಲ ತಿಂಗಳ ಹಿಂದೆ ರಾಜ್ಯ ಸರ್ಕಾರದ ಅರಣ್ಯ ಮತ್ತು ಪರಿಸರ ಸಚಿವರು, ಪ್ರಧಾನ ಮಖ್ಯ ಅರಣ್ಯ ಸಂರಕ್ಷಣಾಧಿಕಾರಿ, ದಕ್ಷಿಣ ಕನ್ನಡ ಡಿಎಫ್ಒ, ಜಿಲ್ಲಾಧಿಕಾರಿಗಳಿಗೆ ಗ್ರಾಮಸ್ಥರು ದೂರು ನೀಡಿದ್ದ ಪತ್ರವೊಂದು ವೈರಲ್ ಆಗಿತ್ತು.
ಪತ್ರವನ್ನು ಗಂಭೀರವಾಗಿ ಪರಿಗಣಿಸಿದ್ದ ಅರಣ್ಯ ಇಲಾಖೆಯು ಈತನ ಮೇಲೊಂದು ಕಣ್ಣಿಟ್ಟಿತ್ತು. ಸದಾ ಈತನ ಚಲನ-ವಲನಗಳನ್ನು ಗಮನಿಸುತ್ತಿದ್ದ ಇಲಾಖೆ, ಇಂದು ಈತನ ಅಕ್ರಮಗಳನ್ನು ಸಾಕ್ಷಿ ಸಮೇತವಾಗಿ ಬಯಲಿಗೆಳೆದಿದ್ದಾರೆ.