ಬೆಳ್ತಂಗಡಿ ಐತಿಹಾಸಿಕ ಗುರುವಾಯನಕೆರೆಯಲ್ಲಿ ಮೀನುಗಳ ಮಾರಣಹೋಮ ನಡೆದಿದೆ. ಸೋಮವಾರ ಬೆಳಗ್ಗೆಯಿಂದಲೇ ಮೀನುಗಳು ಕೆರೆಯಲ್ಲಿ ಸಾಯಲು ಪ್ರಾರಂಭಿಸಿದ್ದು ಕಳೆದ ಎರಡು ದಿನಗಳಲ್ಲಿ ಲಕ್ಷಾಂತರ ಮೀನುಗಳು ಸಾವನ್ನಪ್ಪಿವೆ.
ರಾಶಿ ರಾಶಿ ಮೀನುಗಳು ಸತ್ತು ಕೆರೆಯಲ್ಲಿ ತೇಲುತ್ತಿರುವುದರಿಂದ ಸುತ್ತಮುತ್ತಲಿನ ಪರಿಸರದಲ್ಲಿ ಭಾರೀ ದುರ್ನಾತ ಬೀರುತ್ತಿದೆ. ಇನ್ನು ಇಷ್ಟೊಂದು ಪ್ರಮಾಣದಲ್ಲಿ ಮೀನುಗಳು ಸಾವನ್ನಪ್ಪಿರುವುದು ಅನುಮಾನ ಮೂಡಿಸಿದ್ದು, ಈಗಾಗಲೇ ಕುವೆಟ್ಟು ಗ್ರಾ ಪಂಚಾಯತ್ ನ ಪಿ.ಡಿ.ಓ ಕೆರೆಯ ನೀರಿನ ಸ್ಯಾಂಪಲ್ ಸಂಗ್ರಹಿಸಿ ಮಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದಾರೆ. ಇನ್ನಷ್ಟೇ ಅದರ ವರದಿ ಬರಬೇಕಿದೆ. ಇನ್ನು ಸ್ಥಳೀಯರ ಸಹಕಾರದೊಂದಿಗೆ ಸತ್ತ ಮೀನುಗಳನ್ನು ಗುಂಡಿ ತೆಗೆದು ಹಾಕಲಾಗುತ್ತಿದೆ.
ಮತ್ತೊಂದೆಡೆ ಖಾಸಗಿ ಶಿಕ್ಷಣಸಂಸ್ಥೆಯ ತ್ಯಾಜ್ಯ ನೀರು ಕೆರೆ ಸೇರುತ್ತಿರುವುದರಿಂದ ಈ ರೀತಿ ಮೀನುಗಳು ಸಾಯುತ್ತಿವೆ ಎಂಬ ಆರೋಪ ಕೂಡ ಕೇಳಿ ಬರುತ್ತಿದೆ. ಸದ್ಯ ಮೀನುಗಳು ಇಷ್ಟೊಂದು ಪ್ರಮಾಣದಲ್ಲಿ ಸತ್ತಿರೋದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಯೋಗಾಲಯದ ವರದಿ ಬಂದ ಬಳಿಕ ಮೀನುಗಳ ಸಾವಿಗೆ ಕಾರಣ ಏನು ಎಂಬುವುದು ಗೊತ್ತಾಗಲಿದೆ.