ಉಡುಪಿ,: ಮೀನುಗಾರಿಕಾ ಬೋಟಿನಿಂದ ಅಕಸ್ಮಿಕವಾಗಿ ಸಮುದ್ರಕ್ಕೆ ಬಿದ್ದ ಮೀನುಗಾರರೊಬ್ಬರನ್ನು ಸುಮಾರು 14 ಗಂಟೆಗಳ ಬಳಿಕ ರಕ್ಷಿಸಿದ ಘಟನೆ ಮಲ್ಪೆಯಲ್ಲಿ ನಡೆದಿದೆ. ಆಂಧ್ರಪ್ರದೇಶದ ಪುಕಾಲು ಕಮೇಯ (32) ರಕ್ಷಿಸಲ್ಪಟ್ಟ ಮೀನುಗಾರ.
ಸುಮಾರು 35 ಮಂದಿ ಮೀನುಗಾರರು ಪರ್ಸಿನ್ ಬೋಟಿನಲ್ಲಿ ಮೀನುಗಾರಿಕೆಗೆ ತೆರಳಿದ್ದು, ಮೀನುಗಾರಿಕೆ ಮುಗಿಸಿ ವಾಪಾಸ್ಸು ಮಲ್ಪೆ ಬಂದರಿಗೆ ಬರುತ್ತಿದ್ದ ವೇಳೆ ಎ.16ರಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಬೋಟಿನ ಹಿಂದುಗಡೆ ನಿಂತಿದ್ದ ಪುಕಾಲು ಕಮೇಯ ಅಕಸ್ಮಿಕವಾಗಿ ಸಮುದ್ರಕ್ಕೆ ಬಿದ್ದಿದ್ದಾರೆ.ಈ ವಿಚಾರ ಸ್ವಲ್ಪ ದೂರ ಹೋದ ಬಳಿಕ ಇತರ ಮೀನುಗಾರರಿಗೆ ತಿಳಿದು, ಕೂಡಲೇ ಬೋಟನ್ನು ವಾಪಾಸ್ಸು ತೆಗೆದು ಕೊಂಡು ಹೋಗಿ ಹುಡುಕಾಟ ನಡೆಸಿದರು. ಆದರೆ ಎಲ್ಲೂ ಪುಕಾಲು ಪತ್ತೆಯಾಗಿರಲಿಲ್ಲ. ಬಳಿಕ ಮೀನುಗಾರರು ಜೀವರಕ್ಷಕರಿಗೆ ಮಾಹಿತಿ ನೀಡಿದರು. ಇವರೆಲ್ಲರು ಪುಕಾಲು ಮೃತಪಟ್ಟಿರಬಹುದು ಎಂದು ಭಾವಿಸಿದ್ದರು.
ಈ ಮಧ್ಯೆ ನೀರಿಗೆ ಬಿದ್ದಿದ್ದ ಪುಕಾಲು ತನಗೆ ಸಿಕ್ಕಿದ ನಾಲ್ಕು ನೀರಿನ ಖಾಲಿ ಬಾಟಲಿಯನ್ನು ಟೀಶರ್ಟ್ ಒಳಗೆ ಹಾಕಿಕೊಂಡು ಸ್ವಲ್ಪ ದೂರು ಈಜಾಡಿ ಕೊಂಡು ಬಂದಿದ್ದಾರೆ. ಅಲ್ಲಿಗೆ ಮೀನಿಗೆ ಹಾಕಿದ ಬೀಡಿನ ಬಲೆ ಕಂಡು, ಅದರಲ್ಲಿ ಅಳವಡಿಸಲಾದ ಬಾವುಟವನ್ನು ಆಸರೆಯಾಗಿ ಹಿಡಿದುಕೊಂಡಿದ್ದಾರೆ.. ಬಳಿಕ ಬಲೆಯನ್ನೇ ಆಸರೆಯಾಗಿಸಿಕೊಂಡು ಅಲ್ಲಿಯೇ ನೀರಿನಲ್ಲಿ ಉಳಿದುಕೊಂಡಿದ್ದಾರೆ.
ಎ.16ರ ಸಂಜೆ 6 ಗಂಟೆ ಸುಮಾರಿಗೆ ಹಾಕಿದ್ದ ಈ ಬಲೆಯನ್ನು ಮರುದಿನ ಬೆಳಗಿನ ಜಾವ 4ಗಂಟೆ ಸುಮಾರಿಗೆ ತೆಗೆಯಲು ಬಂದ ಮೀನುಗಾರರಿಗೆ ಪುಕಾಲು ನೀರಿನಲ್ಲಿ ಇರುವುದು ಗೊತ್ತಾಗಿದೆ. ಕೂಡಲೇ ಅವರನ್ನು ನೀರಿನಿಂದ ಮೇಲಕ್ಕೆತ್ತೆ ದಡಕ್ಕೆ ಕರೆತರಲಾಯಿತು. ಆರೋಗ್ಯದಲ್ಲಿ ಏರುಪೇರಾದ ಕಾರಣ ಅವರನ್ನು ಮುಳುಗು ತಜ್ಞ ಈಶ್ವರ ಮಲ್ಪೆ ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಿದರು. ಬಳಿಕ ಚೇತರಿಸಿಕೊಂಡ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.