ಕಾಸರಗೋಡು: ಬೈಹುಲ್ಲು ಹೇರಿಕೊಂಡು ಹೋಗುತ್ತಿದ್ದ ಸಕಲೇಶಪುರ ಕಡೆಯಿಂದ ಕಾಸರಗೋಡಿನ ಮುಳ್ಳೆರಿಯ ಕಡೆಗೆ ಹೋಗುತ್ತಿದ್ದ ಲಾರಿಗೆ ದೊಡ್ಡತೋಟ ಎಂಬಲ್ಲಿ ಬೆಂಕಿ ತಗುಲಿ ಧಗಧಗನೆ ಉರಿದ ಘಟನೆ ಮುಂಜಾನೆ ಸುಮಾರು 3 ಗಂಟೆಗೆ ಸಂಭವಿಸಿದೆ.
ದೊಡ್ಡತೋಟ ಕಂದಡ್ಕದ ಮಧ್ಯೆ ಕಾಸಿನಗೋಡ್ಲು ತಿರುವು ದಾಟುತ್ತಿದ್ದಂತೆ ಎದುರಿನಿಂದ ಬಸ್ಸಿಗೆ ದಾರಿ ಕೊಡುವ ಸಂದರ್ಭದಲ್ಲಿ ಲಾರಿ ರಸ್ತೆ ಬದಿಯಿದ್ದ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಚಾಲಕ ಲಾರಿಯನ್ನು ಬಲಕ್ಕೆ ತಿರುಗಿಸಿದಾಗ ಲಾರಿ ಪಲ್ಟಿಯಾಗಿ ವಿದ್ಯುತ್ ಕಂಬದ ಮೇಲೆ ಬಿತ್ತು.
ಈ ಸಂದರ್ಭ ವಿದ್ಯುತ್ ತಂತಿ ಬೈ ಹುಲ್ಲಿಗೆ ಸ್ಪರ್ಶಿಸಿ ಬೆಂಕಿ ತಗುಲಿತು. ಲಾರಿಯ ಒಳಗೆ ಇದ್ದ ಚಾಲಕ ಸತೀಶ್, ಮ್ಹಾಲಕ ರಾಜೇಶ್ ಹಾಗೂ ಇನ್ನೋರ್ವ ಪುಟ್ಟರಾಜು ಎಂಬವರು ಲಾರಿಯಿಂದ ಹೊರಗೆ ಬಂದು ಯಾವುದೇ ಗಾಯಗಳಿಲ್ಲದೇ ಅದೃಷ್ಟವಶಾತ್ ಪಾರಾಗಿದ್ದಾರೆ.
ಮಾಹಿತಿ ತಿಳಿದ ಅಗ್ನಿಶಾಮಕ ದಳದ ಸುಮಾರು ಮೂರು ವಾಹನಗಳು ಸ್ಥಳಕ್ಕೆ ಬಂದು ಬೆಂಕಿ ನಂದಿಸುವಲ್ಲಿ ಶ್ರಮಿಸಿದ್ದಾರೆ. ಅಷ್ಟೊತ್ತಿಗಾಗಲೇ ಲಾರಿ ಸಂಪೂರ್ಣ ಬೆಂಕಿಗೆ ತುತ್ತಾಗಿ ಅವಶೇಷಗಳು ಮಾತ್ರ ಉಳಿದುಕೊಂಡಿದೆ.
ಸುಮಾರು 3ರಿಂದ 5 ಲಕ್ಷ ಸಂಭವಿಸಬಹುದೆಂದು ಅಂದಾಜಿಸಲಾಗಿದೆ.