ಮಂಗಳೂರು: ಖಾಸಗಿ ಕಾಲೇಜಿನ ವಿದ್ಯಾರ್ಥಿಗಳ ಎರಡು ತಂಡಗಳ ನಡುವೆ ಹೊಡೆದಾಟ ನಡೆದಿದ್ದು ಘಟನೆ ವೇಳೆ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಲಾಗಿದೆ. ಪ್ರಕರಣ ಸಂಬಂಧ 9 ಮಂದಿ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.
ಗಲಾಟೆಯಲ್ಲಿ 5 ಮಂದಿ ಪೊಲೀಸರು ಹಾಗೂ 9 ಮಂದಿ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. 3 ನೇ ವರ್ಷದ ಬಿಎಸ್ಸಿ ಹಾಸ್ಪಿಟಾಲಿಟಿ ಸೈನ್ ಕಲಿಯುತ್ತಿರುವ ಕೇರಳ ಮೂಲದ ಅದರ್ಶ ಪ್ರೇಮ್ ಕುಮಾರ್ ನಿನ್ನೆ ಸಂಜೆ ಸುಮಾರು 7 ಘಂಟೆಗೆ ತನ್ನ ಸ್ನೇಹಿತ ಅಭಿರಾಮಿಯನ್ನು ಭೇಟಿ ಮಾಡಿ ಮಾತನಾಡುವಾಗ ಸಿನಾನ್ ಎಂಬಾತ ಹಾಗೂ ಇತರ 8 ಮಂದಿ ಜನ ಇಂಟರ್ ಲಾಕ್ ಹಾಗೂ ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ ಇದರಿಂದ ಅದರ್ಶ ಹಾಗೂ ಮೊಹಮ್ಮದ್ ನಸೀಪ್ ಗೆ ಗಾಯವಾಗಿದೆ.
ಗಲಾಟೆ ಬಿಡಿಸಲು ಬಂದಿದ್ದ ಅದರ್ಶ ಸ್ನೇಹಿತರಾದ ಅದೇ ಹಾಸ್ಟೆಲ್ ನ ಶನಿನ್ ಮತ್ತು ಶ್ರವಣ ಅವರಿಗೆ ಜೀವ ಬೆದರಿಕೆ ಒಡ್ಡಿರುವುದಾಗಿ ಅದರ್ಶ ದೂರು ನೀಡಿದ್ದಾರೆ.
ಅದರಂತೆ ರಾತ್ರಿ 10 ಗಂಟೆ ಸುಮಾರಿಗೆ ಪಿಎಸ್ ಐ ಶೀತಲ್ ಹಾಗೂ ಸಿಬ್ಬಂದಿ ಹಾಸ್ಟೆಲ್ ಬಳಿ ಹೋದಾಗ ಹಾಸ್ಟೆಲ್ ನಿವಾಸಿ ವಿದ್ಯಾರ್ಥಿಗಳು ಇಂಟರ್ ಲಾಕ್ ಹಾಗೂ ಕುರ್ಚಿಯಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ.