ಮಂಗಳೂರಿನಲ್ಲೊಂದು ಮನ ಮಿಡಿಯುವ ಘಟನೆ ನಡೆದಿದೆ. ಮಗಳ ಮದುವೆಯಂದೇ ತಂದೆ ಹೃದಯಾಘಾತದಿಂದ ನಿಧನವಾದ ಘಟನೆ ಬೋಳಿಯಾರ್ ಕುಚುಗುಡ್ಡೆಯಲ್ಲಿ ಸೋಮವಾರ ನಡೆದಿದೆ.
ಬೋಳಿಯಾರ್ ಕುಚುಗುಡ್ಡೆಯ ಹಸನಬ್ಬ (60) ಮೃತ ವ್ಯಕ್ತಿ. ಬೀಡಿ ಕಾಂಟ್ರಾಕ್ಟರ್ ಆಗಿದ್ದ ಅವರ ಮಗಳಿಗೆ ಕಾಸರಗೋಡಿನ ಯುವಕನೊಂದಿಗೆ ಸೋಮವಾರ ಹೊಸಂಗಡಿಯ ಗ್ರಾಂಡ್ ಅಡಿಟೋರಿಯಂ ನಲ್ಲಿ ಮದುವೆ ನಿಗದಿಯಾಗಿತ್ತು. ಆದರೆ ಹಸನಬ್ಬರಿಗೆ ಸೋಮವಾರ ಮುಂಜಾನೆ 4 ಗಂಟೆಯ ವೇಳೆಗೆ ತೀವ್ರ ಎದೆನೋವು ಕಾಣಿಸಿಕೊಂಡಿತ್ತು.
ಕೂಡಲೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುವ ಪ್ರಯತ್ನ ಮಾಡಿದರೂ ಯಾವುದೇ ಪ್ರಯೋಜನವಾಗದೆ ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ವಧುವಿನ ತಂದೆ ನಿಧನರಾದ ಕಾರಣ ಹೊಸಂಗಡಿಯಲ್ಲಿ ನಡೆಯಬೇಕಿದ್ದ ಮದುವೆ ಸಮಾರಂಭವನ್ನು ರದ್ದುಗೊಳಿಸಿ ಬಳಿಕ ಎರಡು ಕುಟುಂಬದ ಹಿರಿಯರೊಂದಿಗೆ ಚರ್ಚಿಸಿ ಸಂಜೆಯ ವೇಳೆಗೆ ವರನ ಮನೆಯಲ್ಲಿ ನಿಖಾಹ್ ನೆರವೇರಿದೆ ಎಂದು ತಿಳಿದು ಬಂದಿದೆ.
ಮೃತರು ಕುಕ್ಕೋಟ್ಟು ಜುಮಾ ಮಸೀದಿಯ ಕೋಶಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಮೃತರು ಇಬ್ಬರು ಪುತ್ರರು, ನಾಲ್ಕು ಪುತ್ರಿಯರನ್ನು ಅಗಲಿದ್ದಾರೆ. ಇಂದು ಕೊನೆಯ ಪುತ್ರಿಯ ವಿವಾಹ ನಡೆದಿದೆ.