ಮಂಗಳೂರು: ಮಳಲಿ ಮಸೀದಿ ವಿವಾದ ಸಂಬಂಧ ತಾಂಬೂಲ ಪ್ರಶ್ನೆಯಲ್ಲಿ ಶಿವ ಸಾನಿಧ್ಯ ಪತ್ತೆ ಬೆನ್ನಲ್ಲೇ ಮಳಲಿ ಮಸೀದಿಯಲ್ಲಿರೋದು ದೇವಸ್ಥಾನವೋ? ಅಥವಾ ಮಠವೋ? ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಇಲ್ಲಿದ್ದ ಮಠ ಟಿಪ್ಪು ಸುಲ್ತಾನ್ ಸಹಚರನ ದಾಳಿಯಿಂದ ನಾಶವಾಯ್ತಾ ಎಂಬ ಸ್ಪೋಟಕ ಸತ್ಯವೊಂದು ಇತಿಹಾಸ ಪುಸ್ತಕದಿಂದ ಬೆಳಕಿಗೆ ಬಂದಿದೆ.
ಮಳಲಿ ಮಸೀದಿ ಜಾಗದಲ್ಲಿದ್ದ ಶೈವ ಸಂಪ್ರದಾಯದ ಮಠಕ್ಕೆ ಟಿಪ್ಪು ಸಹಚರ ದಾಳಿ ನಡೆಸಿದ್ದು, ಟಿಪ್ಪು ಸಹಚರ ಶೇಖ್ ಆಲಿ ನವಾಬನಿಂದ ಮಳಲಿ ಮಠದ ಮೇಲೂ ದಾಳಿಯಾಗಿದೆ. ಗುರುಪುರದ ಜಂಗಮ ಲಿಂಗಾಯತ ಮಠದ ಪುಸ್ತಕದಲ್ಲಿ ಈ ಸ್ಪೋಟಕ ಸತ್ಯ ಬಹಿರಂಗಗೊಂಡಿದೆ. 2000ನೇ ಇಸವಿಯಲ್ಲಿ ಪ್ರಕಟಗೊಂಡ ನೀಲಕಂಠ ವೈಭವ ಪುಸ್ತಕದಲ್ಲಿದೆ ಟಿಪ್ಪು ಸಹಚರನ ದಾಳಿಯ ಉಲ್ಲೇಖವಿದ್ದು, ಗುರುಪುರದ ಜಂಗಮ ಲಿಂಗಾಯತ ಮಠದಿಂದ ಪ್ರಕಟಗೊಂಡ ಪುಸ್ತಕ ಇದಾಗಿದೆ.
ಕೆಳದಿ ಅರಸರ ಬಳಿಕ ಮಳಲಿ ಪ್ರಾಂತ್ಯದಲ್ಲಿ ಟಿಪ್ಪು ಆಳ್ವಿಕೆ ನಡೆಸಿದ್ದು, ಈ ವೇಳೆ ಟಿಪ್ಪು ಸಹಚರನಿಂದ ಲಿಂಗಾಯತ ಜಂಗಮ ಮಠದ ಹಲವು ಮಠಗಳ ಮೇಲೆ ದಾಳಿ ನಡೆದಿದೆ. ಮಂಗಳೂರಿನಲ್ಲಿ 48 ಲಿಂಗಾಯತ ಮಠಗಳ ಪೈಕಿ 21 ಮಠಗಳು ನಾಶವಾಗಿದ್ದು, ಇದೇ ದಾಳಿಗೆ ತುತ್ತಾಗಿ ಮಸೀದಿ ಜಾಗದ ಲಿಂಗಾಯತ ಮಠವೂ ನಾಶವಾದ ಶಂಕೆ ವ್ಯಕ್ತವಾಗಿದೆ. ಮಳಲಿ ಮಸೀದಿಯಲ್ಲಿ ಪತ್ತೆಯಾಗಿದ್ದು ಲಿಂಗಾಯತ ಸಂಪ್ರದಾಯಕ್ಕೆ ಸೇರಿದ ಶೈವ ಮಠ ಎಂಬ ಚರ್ಚೆ ಶುರುವಾಗಿದೆ. ಗುರುಪುರದ ಜಂಗಮ ಲಿಂಗಾಯತ ಮಠದ ರುದ್ರಮುನಿ ಸ್ವಾಮೀಜಿಯಿಂದಲೂ ಈ ಬಗ್ಗೆ ಸ್ಪಷ್ಟನೆ ಸಿಕ್ಕಿದೆ. ತಾಂಬೂಲ ಪ್ರಶ್ನೆಯಲ್ಲೂ ಶೈವ ಸಂಪ್ರದಾಯದ ಶಿವ ಸಾನಿಧ್ಯ ಇರೋ ಮಾಹಿತಿ ಸಿಕ್ಕಿದೆ. ಇನ್ನು ಮಳಲಿ ಮಸೀದಿ ವಾಸ್ತುಶಿಲ್ಪ ಮತ್ತು ಗುರುಪುರ ಲಿಂಗಾಯತ ಜಂಗಮ ಮಠದ ವಾಸ್ತುಶಿಲ್ಪಕ್ಕೂ ಸಾಮ್ಯತೆ ಇರೋದು ಬೆಳಕಿಗೆ ಬಂದಿದೆ. ಮೇಲ್ಛಾವಣಿ, ಬಾಗಿಲುಗಳ ಶಿಲ್ಪಕಲೆಗಳಲ್ಲಿ ಭಾರೀ ಸಾಮ್ಯತೆ ಇದ್ದು, ಮಳಲಿಯ ಶೈವ ಮಠಕ್ಕೆ ದಾಳಿ ನಡೆಸಿ ಟಿಪ್ಪು ಮಸೀದಿ ಕಟ್ಟಿದನಾ ಎಂಬ ಅನುಮಾನ ವ್ಯಕ್ತವಾಗಿದೆ.